ಕಾಪು : ನಿವೇಶನಕ್ಕಾಗಿ ಕಾಂಗ್ರೆಸ್ ನಿಂಸ ಪ್ರತಿಭಟನೆ
ಕಾಪು : ನಾಲ್ಕು ವರ್ಷಗಳಲ್ಲಿ ಬಡವರಿಗೆ ನಿವೇಶನ ನೀಡದ ರಾಜ್ಯ ಸರ್ಕಾರದ ವಿರುದ್ಧ ಜನರು ಆಕ್ರೋಶಿತರಾಗಿ ದ್ದಾರೆ. ಇದಕ್ಕಾಗಿ ಭಾವನಾತ್ಮಕ ವಿಚಾರಗಳನ್ನು ತಂದು ಜಾತಿಧರ್ಮಗಳ ಮಧ್ಯೆ ಅಪನಂಬಿಕೆ, ಧ್ವೇಷ ಮೂಡಿಸುತ್ತಿದ್ದಾರೆ. ಉಳಿದಿರುವ ಒಂದು ವರ್ಷದಲ್ಲಿ ಇದು ಇನ್ನೂ ಹೆಚ್ಚಾಗಲಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚೆತ್ತು ಕೊಳ್ಳಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.
ಮನೆಯಿಲ್ಲದ ಬಡವರಿಗೆ ನಿವೇಶನ, ಅಕ್ರಮ-ಸಕ್ರಮಕ್ಕಾಗಿ 94 ಸಿ/ 94ಸಿ ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಶೀಘ್ರವೇ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಹಾಗೂ ಶಿರ್ವ ಗ್ರಾಮದ ವೃದ್ಧ, ಬಡ ದಲಿತ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದು ಮನೆಯನ್ನು ನೆಲಸಮಗೊಳಿಸಿ ಬೀದಿಪಾಲಾಗಿಸಿರುವುದನ್ನು ವಿರೋಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಕಾಪುವಿನಲ್ಲಿ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ನಡೆದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಬಿಜೆಪಿ ಸರಕಾರ ಮನೆಗಳನ್ನು ಒಡೆಯುವ ಕೆಲಸ ನಡೆಸುತ್ತಿದೆ. ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ 330 ಶೇ ಹೆಚ್ಚಾಗಿದೆ, ವರ್ಷಕ್ಕೆ 3.5 ಕೋಟಿ ರೂ ಪೆಟ್ರೋಲ್ ಮತ್ತು ಡಿಸೆಲ್ ಮೇಲೆ ತೆರಿಗೆ ಸಂಗ್ರಹಿಸುತ್ತಿರುವ ಬಿಜೆಪಿ ಸರಕಾರ ಶ್ರೀಮಂತ ಉದ್ಯಮಿಗಳ ಸಾಲಗಳನ್ನು ಮನ್ನಾ ಮಾಡುತ್ತಿದೆ. ಅದರೆ ನಿವೇಶನ ರಹಿತರಿಗೆ ನಿವೇಶನ ನೀಡಲು ಇವರಿಗೆ ಆಗುತಿಲ್ಲ ಎಂದು ನುಡಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪು ತಾಲೂಕಿನ ವಿವಿಧ ಗ್ರಾಮ ಪಂಚಾಯತ್ಗಳಲ್ಲಿ ಮನೆ ನಿವೇಶನಕ್ಕಾಗಿ ನಾಲ್ನೂರು ಐನೂರು ಅರ್ಜಿಗಳು ಬಾಕಿಯಿದ್ದು ಕಳೆದ 4 ವರ್ಷಗಳಿಂದ ಒಂದೇ ಒಂದು ಮನೆ ನಿವೇಶನ ಮಂಜೂರಾತಿ ಆಗಿಲ್ಲ .94 ಸಿ/ 94ಸಿ ಸಿ ಯಡಿ ಅರ್ಜಿ ಸಲ್ಲಿಸಿರುವವರಿಗೆ ಹಕ್ಕುಪತ್ರ ನೀಡುತ್ತಿಲ್ಲ. ನಮ್ಮ ಅವಧಿಯಲ್ಲಿ 10 ಸಾವಿರ ಮನೆ , ನಿವೇಶನ ನೀಡಿದ್ದೇವೆ. ನಮ್ಮ ಅವಧಿಯಲ್ಲಿ ಮಂಜೂರಾದವರಿಗೆ ಇನ್ನೂ ಹಕ್ಕುಪತ್ರ ಈ ಸರಕಾರ ನೀಡಿಲ್ಲ. ಚುನಾವಣೆ ಗೆಲ್ಲುವ ಒಂದೇ ಉದ್ದೇಶದಿಂದ ಸಾಮರಸ್ಯವನ್ನು ಕೆಡಿಸುವ ಇವರಿಗೆ ಜನರೇ ತಕ್ಕ ಬುದ್ದಿ ಕಲಿಸಲಿದ್ದಾರೆ ಎಂದರು.
ದಲಿತ ಮುಖಂಡ ಶೇಖರ್ ಹೆಜಮಾಡಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ನಾಗೇಶ್ ಕುಮಾರ್ ಉದ್ಯಾವರ ಜ್ಯೋತೀಶ್ ಹೊಸಹಳ್ಳಿ ಮೊದಲಾದವರು ಮಾತನಾಡಿದರು.
ಕಾಪು ರಾಜೀವ ಭವನದಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಈ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉತ್ತರ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಮಾರ್ ಪಕ್ಕಾ, ಪಕ್ಷದ ಮುಖಂಡರಾದ ಶಿವಾಜಿ ಸುವರ್ಣ, ಎಂ.ಪಿ. ಮೊಯ್ದಿನಬ್ಬ, ದೀಪಕ್ ಕೋಟ್ಯಾನ್, ಶಾಂತಲತಾ ಶೆಟ್ಟಿ, ಅಮೀರ್ ಮಹಮ್ಮದ್, ಶರ್ಫುದ್ದೀನ್ ಶೇಖ್, ರಮೀಝ್ ಹುಸೈನ್, ವಿಲ್ಸನ್ ರೋಡ್ರಿಗಸ್, ಐಡಾ ಗಿಬ್ಬಾ ಡಿಸೋಜ, ಮಹೇಶ್ ಶೆಟ್ಟಿ ಕುರ್ಕಾಲು, ಕಿಶೋರ್ ಕುಮಾರ್ ಅಂಬಾಡಿ, ಇಂದಿರಾ ಆಚಾರ್ಯ ಕಟಪಾಡಿ, ಜಿತೇಂದ್ರ ಪುರ್ಟಾಡೋ, ಸುನೀಲ್ ಬಂಗೇರ, ಕೆ.ಎಚ್. ಉಸ್ಮಾನ್, ನವೀನ್ ಜೆ.ಶೆಟ್ಟಿ, ಜ್ಯೋತಿ ಮೆನನ್, ಮೈಕಲ್ ಡಿ ಸೋಜ, ಡೇವಿಡ್ ಡಿ ಸೋಜ, ಕೀರ್ತಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಫಾರೂಕ್ ಚಂದ್ರನಗರ, ಅಶೋಕ್ ನಾಯರಿ ಮೊದಲಾದವರು ಭಾಗವಹಿಸಿದ್ದರು.