ಸುರತ್ಕಲ್ ಕಡಲ ಕಿನಾರೆಯಲ್ಲಿ ತೈಲ ತ್ಯಾಜ್ಯ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ
ತಪಾಸಣೆಗಾಗಿ ಸಿಎಂಎಫ್ಆರ್ ಐಗೆ ಮಾದರಿ ರವಾನೆ: ಡಾ.ರಾಜೇಂದ್ರ ಕೆ.ವಿ.
ಮಂಗಳೂರು, ಮೇ 14: ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಸುರತ್ಕಲ್ ಕಡಲ ಕಿನಾರೆಯಲ್ಲಿ ಕಂಡು ಬಂದ ತೈಲ ಮಾದರಿಯ ತ್ಯಾಜ್ಯದ ಕುರಿತು ದ.ಕ. ಜಿಲ್ಲಾಧಿಕಾರಿ ನೇತ್ವತ್ವದಲ್ಲಿ ತನಿಖೆ ಆರಂಭಗೊಂಡಿದೆ.
ಸದ್ಯ ಡಿಡಿಎಂಎ, ಎಂಆರ್ ಪಿಎಲ್, ಎಂಇಝೆಡ್ ನ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತೈಲ ಮಾದರಿಯ ತ್ಯಾಜ್ಯದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದನ್ನು ತಪಾಸಣೆಗಾಗಿ ಸಿಎಂಎಫ್ಆರ್ ಐಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮಾಹಿತಿ ನೀಡಿದ್ದಾರೆ.
ಕಡಲ ಕಿನಾರೆಯಲ್ಲಿ ಪತ್ತೆಯಾದ ತ್ಯಾಜ್ಯದ ಪ್ರಾಥಮಿಕ ತನಿಖೆ ನಡೆಸಿದ್ದು, ಅದು ಪಾಚಿಯಂತೆ ಕಾಣುತ್ತಿದೆ. ಇದು ಸಾಮಾನ್ಯವಾಗಿ ಮಳೆ ಆರಂಭಕ್ಕಿಂತಲೂ ಪೂರ್ವದಲ್ಲಿ ಸಾಮಾನ್ಯವಾಗಿ ಕಡಲ ಕಿನಾರೆಯಲ್ಲಿ ಕಂಡುಬರುವ ಪಾಚಿಯಂತೆ ತೋರುತ್ತಿದೆ. ಹೆಚ್ಚಿನ ಗಾಳಿ ಮತ್ತು ಅಲೆಗಳ ಘರ್ಷಣೆಯಿಂದಾಗಿ ಸಮುದ್ರದ ತಳಭಾಗದಲ್ಲಿರುವ ಕೆಸರು ಮೇಲಕ್ಕೆ ಬರುವುದರಿಂದ ಇದು ಕಾಣಿಸಿಕೊಳ್ಳುತ್ತದೆ. ಅದಾಗ್ಯೂ ತೈಲ ಮತ್ತು ಗ್ರೀಸ್ ಪರೀಕ್ಷೆಗಾಗಿ ಇದರ ಮಾದರಿಯನ್ನು ಕೆಎಸ್ಪಿಸಿಬಿ ಸಂಗ್ರಹಿಸಿದ್ದು, ವರದಿ ಬಂದ ಬಳಿಕ ದೃಢೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ .