ಸುರತ್ಕಲ್: ಖಂಡಿಗೆ ಆಯನ ನಿಮಿತ್ತ ಮೀನು ಹಿಡಿಯುವ ಜಾತ್ರೆ
ಸುರತ್ಕಲ್ : ಇಲ್ಲಿನ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ಖಂಡಿಗೆ ಶ್ರೀ ಧರ್ಮ ಅರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಪಾವಂಜೆಯ ನಂದಿನಿ ನದಿಯ ತಟದಲ್ಲಿ ಮೀನು ಹಿಡಿಯುವ ಜಾತ್ರೆ ಶನಿವಾರ ನಡೆಯಿತು.
ಬೆಳಗ್ಗೆ 7 ಗಂಟೆಗೆ ದೈವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ನಡೆದ ಬಳಿಕ ದೈವದ ಪ್ರಸಾದವನ್ನು ನಂದಿನಿ ನದಿಯಲ್ಲಿ ಲೀನಗೊಳಿಸಿ ಪೂಜೆ ನಡೆದ ಬಳಿಕ ಮೀನು ಹಿಡಿಯುವ ಜಾತ್ರಗೆ ಚಾಲನೆ ದೊರೆಯಿತು.
ಸಾವಿರಾರು ಮಂದಿ ಊರು - ಪರ ಊರುಗಳ ಭಕ್ತರು ಪಾಲ್ಗೊಂಡು ಸ್ವತಹಾ ತಾವೇ ಬಲೆ ಹಾಕಿ ಮೀನುಗಳನ್ನು ಹಿಡಿಯುತ್ತಾರೆ. ಇನ್ನೂ ಕೆಲವರು ಸಿಕ್ಕಿದಮೀನುಗಳನ್ನು ಸ್ಥಳದಲ್ಲೇ ಮಾರಾಟ ಮಾಡುತ್ತಾರೆ.
ಜಾತ್ರೆಯ ದಿನ ನದಿಯ ಮೀನು ಕೆಜಿಗೆ 500- 600 ನೀಡಿ ಖರೀಸುತ್ತಾರೆ. ಇಲ್ಲಿ ಹಿಡಿದ ಮತ್ತು ಖರೀದಿಸಿದ ಮೀನುಗಳಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ಮನೆ ಮಂದಿ ಮೀನುಗಳನ್ನು ದೈವದ ಪ್ರಸಾದದ ರೂಪದಲ್ಲಿ ಸೇವಿಸುವುದು ಇಲ್ಲಿನ ವಾಡಿಕೆ. ಅಲ್ಲದೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಧ್ವಜರೋಹನ ನಡೆಸಿ ಮಾಡಲ್ಪಡುವ ಜಾತ್ರೆಗಳಲ್ಲಿ ( ಖಂಡಿಗೆ ಆಯನ ) ಖಂಡಿಗೆ ಜಾತ್ರೆ ವರ್ಷದ ಕೊನೇಯ ಜಾತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.