ಬಿ.ಸಿ.ರೋಡು ಕರಾವಳಿ ಕಲೋತ್ಸವ ವೇದಿಕೆಯಲ್ಲಿ ದಫ್ ಪ್ರದರ್ಶನ
ಬಂಟ್ವಾಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ಬಿ ಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ “ಕರಾವಳಿ ಕಲೋತ್ಸವ-2022” ಕಾರ್ಯಕ್ರಮದ ಪ್ರಯುಕ್ತ ಗುರುವಾರ ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರತಿಷ್ಠಿತ ತಂಡಗಳಿಂದ ದಫ್ ಪ್ರದರ್ಶನ ಸಾರ್ವಜನಿಕರ ಮನಸೂರೆಗೊಂಡಿತು.
ಕರಾವಳಿ ಕಲೋತ್ಸವ ಸಮಿತಿಯ ಅಧ್ಯಕ್ಷ ಸುದರ್ಶನ್ ಜೈನ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ದ ಕ ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಮಾತನಾಡಿದರು.
ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ದಫ್ ಎಸೋಸಿಯೇಶನ್ ಸದಸ್ಯರಾದ ಯು.ಮುಸ್ತಫಾ ಆಲಡ್ಕ, ಇರ್ಶಾದ್ ಪಾಣೆಮಂಗಳೂರು, ಇರ್ಶಾದ್ ಡ್ರೀಮ್ಸ್ ಗೂಡಿನ ಬಳಿ, ಉದ್ಯಮಿಗಳಾದ ಹನೀಫ್ ಹಾಸ್ಕೋ, ಅಬ್ದುಲ್ಲಾ ಮೋನು ನಂದಾವರ, ಕರಾವಳಿ ಕಲೋತ್ಸವ ಸಮಿತಿ ಸದಸ್ಯರಾದ ಶಿವಪ್ರಸಾದ್ ಬಂಟ್ವಾಳ, ರಾಜಾ ಚೆಂಡ್ತಿಮಾರ್, ನವೀನ, ಸೌಮ್ಯ, ಯೋಗೀಶ ಮೊದಲಾದವರು ಭಾಗವಹಿಸಿದ್ದರು.
ಆಕರ್ಷಕ ಶೈಲಿಯ ಪ್ರದರ್ಶನದ ಮೂಲಕ ಉಡುಪಿ ಜಿಲ್ಲೆಯ ಕಟಪಾಡಿ-ಮಣಿಪುರದ ಖಲಂದರ್ ಷಾ ದಫ್ ತಂಡ ಹಾಗೂ ಬೆಳ್ಮ-ಅಡ್ಕರೆಪಡ್ಪುವಿನ ಖಿದ್ಮತುಲ್ ಇಸ್ಲಾಂ ದಫ್ ತಂಡದ ಸದಸ್ಯರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಇದೇ ವೇಳೆ ದಫ್ ತರಬೇತುದಾರ ಹಂಝ ಉಸ್ತಾದ್ ಇರಾ ಹಾಗೂ ಕರಾವಳಿ ದಫ್ ಪ್ರದರ್ಶನ ಸಮಿತಿಯ ಪ್ರಧಾನ ಸಂಚಾಲಕ ಮುಹಮ್ಮದ್ ನಂದಾವರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ನಿರೂಪಕ ಹಮೀದ್ ಗೋಳ್ತಮಜಲು ಹಾಗೂ ಹಾಡುಗಾರ ಅಸ್ತರ್ ಆಲಡ್ಕ ಅವರನ್ನು ಅಭಿನಂದಿಸಲಾಯಿತು.
ದ.ಕ.ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಶನ್ ಉಪಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ವಂದಿಸಿದರು, ಹಮೀದ್ ಗೋಳ್ತಮಜಲು ಕಾರ್ಯ ಕ್ರಮ ನಿರೂಪಿಸಿದರು.