ಕಡಬ: ಚಲಿಸುತ್ತಿದ್ದ ಕಾರು ಏಕಾಏಕಿ ಬೆಂಕಿಗಾಹುತಿ !
ಕಡಬ, ಮೇ 15: ಚಲಿಸುತ್ತಿರುವಾಗಲೇ ಕಾರೊಂದು ಬೆಂಕಿಗಾಹುತಿಯಾದ ಘಟನೆ ಕೊಂಬಾರು ಗ್ರಾಮದ ಪೆರುಂದೋಡಿ ಕಟ್ಟೆ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಪಟ್ರಮೆ ನಿವಾಸಿ ಆನಂದ ಗೌಡ ಎಂಬವರಿಗೆ ಸೇರಿದ ಕಾರು ಇದಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಆನಂದ ಗೌಡ, ಮಗು ಸಹಿತ ನಾಲ್ವರು ಕಾರಿನಿಂದ ಇಳಿದು ಬಚಾವ್ ಆಗಿದ್ದಾರೆ. ಒಬ್ಬರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ತಿಳಿದುಬಂದಿದೆ
ಆನಂದ ಗೌಡ ಕಳೆದ ರಾತ್ರಿ ಕುಟುಂಬಸ್ಥರೊಂದಿಗೆ ಕೊಂಬಾರು ಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಕಾರಿನಲ್ಲಿ ಹೊರಟಿದ್ದರು. ಇವರು ಪೆರುಂದೋಡಿ ಕಟ್ಟೆ ಸಮೀಪ ತಲುಪಿದಾಗ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅದರಲ್ಲಿದ್ದವರು ಕೆಳಗೆ ಇಳಿಯುತ್ತಿದ್ದಂತೆ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದೆ. ಕೂಡಲೇ ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತಾದರೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸುವಷ್ಟರಲ್ಲಿ ಕಾರು ಬಹುತೇಕ ಬೆಂಕಿಗಾಹುತಿಯಾಗಿತ್ತು.
Next Story