ಮೂಡಬಿದ್ರೆ ಸಮೀಪ 400 ಕೆ.ವಿ. ಸ್ಟೇಷನ್ ನಿರ್ಮಾಣ : ಸಚಿವ ಸುನೀಲ್ ಕುಮಾರ್
ಕಾರ್ಕಳ : ಮೆಸ್ಕಾಂ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಮೂಡಬಿದ್ರೆ ಸಮೀಪ 400 ಕೆ.ವಿ. ಸ್ಟೇಷನ್ ನಿರ್ಮಿಸುವುದಾಗಿ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಮೇ 18ರಂದು ಕಾರ್ಕಳದಲ್ಲಿ ವಿಭಾಗೀಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಉಡುಪಿ, ದ.ಕ., ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯನ್ನೊಳಗೊಂಡ ಮೆಸ್ಕಾಂ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಬಗಹರಿಸುವ ಸಲುವಾಗಿ 400 ಕೆ.ವಿ. ಸ್ಟೇಷನ್ ನಿರ್ಮಾಣ ಮಾಡಲಾಗುವುದು. ಮಂಗಳೂರಿನಲ್ಲಿ ಎಂಆರ್ಪಿಎಲ್, ಓಎನ್ಜಿಸಿ ಯಂತಹ ಬೃಹತ್ ಕಂಪೆನಿ, ಕೈಗಾರಿಕೆಗಳಿರುವುದರಿಂದ ವಿದ್ಯುತ್ ಬೇಡಿಕೆಯೂ ಹೆಚ್ಚಿದೆ. ಮನೆಗಳಿಗೆ, ಕೈಗಾರಿಕೆ ಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜುಗೊಳಿಸುವ ನಿಟ್ಟಿನಲ್ಲಿ ಮೂಡಬಿದ್ರೆ ಸಮೀಪ 37 ಎಕ್ರೆ ಜಾಗ ಗುರುತಿಸ ಲಾಗಿದೆ ಎಂದರು.
ಕಾರ್ಕಳ ನಗರದಲ್ಲಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಯು.ಜಿ. ಕೇಬಲ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಸಾಲ್ಮರದಿಂದ ಅನಂತಶಯನ, ಮೂರುಮಾರ್ಗದಿಂದ ಆನೆಕೆರೆ, ಮಾರ್ಕೆಟ್ ರಸ್ತೆಯಲ್ಲಿ ಪ್ರಾರಂಭಿಕ ಹಂತವಾಗಿ ಯು.ಜಿ. ಕೇಬಲ್ ಅಳವಡಿಕೆ ಕಾರ್ಯ ಮಾಡಲಾಗುವುದು. ಕಾರ್ಕಳ ಹೆಬ್ರಿ ತಾಲೂಕಿನ ಹಳೆ ವಿದ್ಯುತ್ ತಂತಿಗಳನ್ನು ತೆಗೆದು ಹೊಸ ತಂತಿಗಳನ್ನು ಅಳವಡಿಸಲಾಗುವುದು. ಕೇಂದ್ರ ಸರಕಾರದ ಆರ್ಡಿಎಸ್ಎಸ್ ಯೋಜನೆಯಡಿ ಇದಕ್ಕಾಗಿ 110 ಕೋಟಿ ರೂ. ಅನುದಾನ ಲಭ್ಯವಾಗಿದೆ. ಮೆಸ್ಕಾಂ ಇಲಾಖೆಯ ಎಲ್ಲ ಯೋಜನೆಗಳಲ್ಲೂ ಕಾರ್ಕಳಕ್ಕೆ ಸಿಂಹಪಾಲು ದೊರೆಯಲಿದೆ ಎಂದರು.
ದ.ಕ. ಉಡುಪಿ ಜಿಲ್ಲೆಯ ಎಲ್ಲ ಸ್ಟೇಷನ್ಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕೊಲ್ಲೂರಿನಲ್ಲಿ 33 ಕೆ.ವಿ. ಸ್ಟೇಷನ್ ನಿರ್ಮಾಣವಾಗಿದೆ. ಮುಖ್ಯಮಂತ್ರಿಯವರು ತನಗೆ ಇಂಧನ ಖಾತೆ ನೀಡಿರುವುದರಿಂದ ಮುಂದಿನ 15 ವರ್ಷಗಳ ದೂರದೃಷ್ಟಿ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದ ಎಲ್ಲರ ಮನೆಗೂ ಬೆಳಕು ನೀಡುವ ಉದ್ದೇಶದಿಂದ ಗ್ರಾ.ಪಂ. ಎನ್ಒಸಿ ಇಲ್ಲದೇ, ಕೇವಲ ಆಧಾರ್, ರೇಷನ್ ಪ್ರತಿ ಪಡೆದು ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯದಲ್ಲಿ 3 ಲಕ್ಷ ಹಾಗೂ ಕಾರ್ಕಳದ 4300 ಕುಟುಂಬಗಳಿಗೆ ಬೆಳಕು ಯೋಜನೆಯಡಿ ಅನುಕೂಲವಾಗಿದೆ ಎಂದು ಸಚಿವರು ತಿಳಿಸಿದರು.
ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ದುರಸ್ತಿಪಡಿಸುವ ನಿಟ್ಟಿನಲ್ಲಿ ಟಿಸಿ ನಿರ್ವಹಣಾ ಅಭಿಯಾನ ಪ್ರಾರಂಭಿಸಲಾ ಯಿತು. ಸುಮಾರು 8 ಸಾವಿರ ಟಿಸಿಗಳನ್ನು 24 ಗಂಟೆಗಳಲ್ಲಿ ದುರಸ್ತಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಟಿಸಿ ಕೆಡದಂತೆ ನೋಡಿಕೊಳ್ಳಲಾಗುವುದು. ಟಿಸಿ ಅಭಿಯಾನದಲ್ಲಿ ಕಾರ್ಯನಿರ್ವಹಿಸಿದ ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ವರ್ಗವನ್ನು ಸಚಿವರು ಇದೇ ಸಂದರ್ಭ ಮುಕ್ತ ಕಂಠದಿಂದ ಪ್ರಶಂಸಿಸಿದರು.
ಕಾರ್ಕಳ ಹೆಬ್ರಿ ಉಭಯ ತಾಲೂಕಿಗೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಹಲವು ಶಾಖೆಗಳನ್ನು ತೆರೆಯಲಾಗಿದೆ. ಬೈಲೂರು, ಬಜಗೋಳಿ, ಅಜೆಕಾರಿನಲ್ಲಿ 33/11 ಕೆ.ವಿ. ಉಪಕೇಂದ್ರ ಸ್ಥಾಪಿಸಲಾಗಿದೆ. ಇಂದಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಗುತ್ತಿಗೆದಾರರ ಸಂಘ ಹಲವು ದಿನಗಳಿಂದ ಶ್ರಮಿಸಿದೆ ಎಂದು ಹೇಳಿ ಸಂಘವನ್ನುಅಭಿನಂದಿಸಿದರು.
ಸುನೀಲ್ ಕುಮಾರ್ ಅವರು ಇಂಧನ ಇಲಾಖೆ ಸಚಿವರಾದ ಬಳಿಕ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ. ಓರ್ವ ಕ್ರಿಯಾಶೀಲ ಸಚಿವರು ಇಂಧನ ಇಲಾಖೆಗೆ ದೊರೆತಿರುವುದು ನಮಗೆಲ್ಲ ಸಂತಸ ತಂದಿದೆ. ಸರಳತೆ, ಪ್ರಾಮಾಣಿಕತೆ, ದಕ್ಷತೆ ಹೊಂದಿರುವ ಸಚಿವರು ಇಂಧನ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷ ಟಿ.ಆರ್. ರಾಮಕೃಷ್ಣ ಅಭಿಪ್ರಾಯಪಟ್ಟರು.
ಕುಂದಾಪುರ, ಉಡುಪಿ, ಕಾರ್ಕಳದ ಕಾರ್ಯ ನಿರ್ವಾಹಕ ಇಂಜಿನಿಯರ್ಗಳು ಸಚಿವರನ್ನು ಅಭಿನಂದಿಸಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಜಿ.ಪಂ. ಸಿಇಒ ಪ್ರಸನ್ನ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಇಒ ಗುರುದತ್, ಮೆಸ್ಕಾಂ ನಿರ್ದೇಶಕ ಮುನಿಯಾಲು ದಿನೇಶ್ ಪೈ, ಗುತ್ತಿಗೆದಾರರ ಸಂಘದ ಅಧ್ಯಕ್ಷ ರಿಚರ್ಡ್ ಮಿರಿಂಡಾ, ಮೆಸ್ಕಾಂ ವಲಯದ ಮುಖ್ಯ ಅಧಿಕಾರಿ ಹರೀಶ್ ಕುಮಾರ್, ಮೆಸ್ಕಾಂ ನಿರ್ದೇಶಕ ಶಿವಕುಮಾರ್, ಬೆಂಗಳೂರು ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ರೆಡ್ಡಿ, ಬೆಂಗಳೂರು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜ ನಾಯಕ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಡಿ. ಪದ್ಮಾವತಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಸನ್ನ, ಮುಖ್ಯ ಆರ್ಥಿಕ ಅಧಿಕಾರಿ ಜಗದೀಶ್, ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ ಹರಿಶ್ಚಂದ್ರ, ಖಾತಾ ಅಧಿಕಾರಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ನಾಯಕ್, ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್, ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜಯ್ ಮತ್ತು ಬಳಗ ಪ್ರಾರ್ಥಿಸಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಸ್ವಾಗತಿಸಿ ದರು. ಮೆಸ್ಕಾಂ ಲೆಕ್ಕಾಧಿಕಾರಿ ಗಿರೀಶ್ ರಾವ್ ನಿರೂಪಿಸಿ, ವಿನಯ್ ಕಾಮತ್ ವಂದಿಸಿದರು.