ಮೇ 27ರಂದು ಮಂಗಳೂರಿನಲ್ಲಿ ಜನಾಧಿಕಾರ ಸಮಾವೇಶ: ಇಕ್ಬಾಲ್ ಬೆಳ್ಳಾರೆ
ಪುತ್ತೂರು: ಎಸ್ಡಿಪಿಐ ವತಿಯಿಂದ ಐತಿಹಾಸಿಕ ಬೃಹತ್ ಜನಾಧಿಕಾರ ಸಮಾವೇಶವನ್ನು ಮಂಗಳೂರಿನ ಕಣ್ಣೂರು ಮೈದಾನದಲ್ಲಿ ಮೇ 27 ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಸ್ಡಿಪಿಐ ಜಿಲ್ಲಾ ಮಾಧ್ಯಮ ಸಂಯೋಜಕ ಇಕ್ಬಾಲ್ ಬೆಳ್ಳಾರೆ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಸ್ತುತ ಬಿಜೆಪಿ ಸರಕಾರದ ಆಡಳಿತದಿಂದಾಗಿ ಸಾಮಾಜಿಕ ನ್ಯಾಯ ಪುನರ್ ಸ್ಥಾಪಿಸುವ ಸ್ಥಿತಿಯಲ್ಲಿಲ್ಲ. ರಾಜ್ಯದಾದ್ಯಂತ ಒಂದು ರೀತಿಯ ಪ್ರಕ್ಷುದ್ಧ ವಾತಾವರಣ ಉಂಟಾಗಿದೆ. ನೈಜ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರೀಕರಿಸಬೇಕಾದ ಸರಕಾರದ ಭಯೋತ್ಪಾದಕ ರೀತಿಯಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ವಿರೋಧ ಪಕ್ಷ, ಪ್ರತಿಪಕ್ಷದವರು ಮೌನವಾಗಿಯೇ ಕುಳಿತಿದ್ದಾರೆ. ಈ ನಿಟ್ಟಿನಲ್ಲಿ ಆಡಳಿತಾರೂಢರಿಂದ ಕಲುಷಿತಗೊಂಡಿರುವ ಪ್ರಸ್ತುತ ವಾತಾವರಣ ಕುರಿತು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಮಾವೇಶದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಪೈಝಿ, ಕೇರಳ ರಾಜ್ಯಾಧ್ಯಕ್ಷ ಅಶ್ರಫ್ ಮೌಲವಿ, ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ದಲಿತ ಮುಖಂಡ ಬಿ.ಆರ್.ಭಾಸ್ಕರ್ ಪ್ರಸಾದ್ ಸೇರಿದಂತೆ ರಾಜ್ಯ, ಜಿಲ್ಲಾ ಮಟ್ಟದ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ಕ್ಷೇತ್ರ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಬೆಳ್ತಂಗಡಿ ಅಧ್ಯಕ್ಷ ನಿಸಾರ್ ಕುದ್ರಡ್ಕ, ಸುಳ್ಯ ಉಪಾಧ್ಯಕ್ಷ ಬಾಬು ಸವಣೂರು ಉಪಸ್ಥಿತರಿದ್ದರು.