ಮಂಗಳೂರು: ಸಮುದ್ರ ಮಾಲಿನ್ಯ ತನಿಖೆಗೆ ಎನ್ಜಿಟಿಯಿಂದ ಸಮಿತಿ ನೇಮಕ
ಮಂಗಳೂರು : ಸುರತ್ಕಲ್ ಸಹಿತ ಹಲವೆಡೆ ಕಂಡು ಬಂದಿದದ ಸಮುದ್ರ ಮಾಲಿನ್ಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ಜಿಟಿ)ದ ಪ್ರಧಾನ ಪೀಠವು ಜಂಟಿ ಸಮಿತಿಯೊಂದನ್ನು ನಿಯೋಜಿಸಿದೆ.
ಮಾಲಿನ್ಯದ ಮೂಲ ಪತ್ತೆ ಸಹಿತ ಇತರ ಕಾರಣಗಳನ್ನು ಕಂಡುಕೊಳ್ಳುವುದಕ್ಕಾಗಿ ಈ ಸಮಿತಿ ನಿಯೋಜಿಸ ಲಾಗಿದೆ. ಸುರತ್ಕಲ್ ಗುಡ್ಡೆಕೊಪ್ಲ ಬಳಿ ಸಮುದ್ರದಲ್ಲಿ ಜಿಡ್ಡಾದ ವಸ್ತು ತೇಲಿ ಬಂದಿದ್ದು, ಟಾರಿನ ಉಂಡೆಗಳೂ ದೊರಕಿದ್ದವು. ತಣ್ಣೀರುಬಾವಿಯ ಬಳಿ ಕೆಲವು ಮೀನುಗಾರರು ತಾವು ಫಲ್ಗುಣಿ ನದಿಯಲ್ಲಿ ಬೆಳೆಸಿದ್ದ ಪಂಜರ ಕೃಷಿಯ ಮೀನುಗಳು ಸಾವ್ನಪ್ಪಿರುವುದಾಗಿಯೂ ದೂರಿದ್ದರು. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಎನ್ಜಿಟಿ ಸಮಿತಿ ರಚಿಸಿದೆ.
ಸಮಿತಿಯು ಎರಡು ವಾರದೊಳಗೆ ಸಭೆ ಸೇರಿ ಸ್ಥಳ ಸಮೀಕ್ಷೆ, ಅಧ್ಯಯನ ನಡೆಸಬೇಕು. ಸ್ಥಳೀಯರೊಂದಿಗೆ ಮಾತುಕತೆ ನಡೆಸಬೇಕು. ಎರಡು ತಿಂಗಳೊಳಗೆ ಎನ್ಜಿಟಿಗೆ ವರದಿ ನೀಡಬೇಕು ಎಂದು ತಿಳಿಸಲಾಗಿದೆ.
ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ದ.ಕ. ಜಿಲ್ಲಾಧಿಕಾರಿ, ಕೋಸ್ಟ್ಗಾರ್ಡ್ನ ಮಂಗಳೂರು ಘಟಕ, ಕೇಂದ್ರೀಯ ಮೀನು ಸಂಶೋಧನಾ ಸಂಸ್ಥೆ ಹಾಗೂ ಚೆನ್ನೈನ ಸಾಗರ ಅಭಿವೃದ್ಧಿ ವಿಭಾಗದವರು ಸಮಿತಿಯಲ್ಲಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತನಿಖೆಗೆ ನೋಡಲ್ ಏಜೆನ್ಸಿಯಾಗಿದೆ.
ಈ ಆದೇಶವನ್ನು ಎನ್ಜಿಟಿ ಅಧ್ಯಕ್ಷ ಆದರ್ಶ್ ಕುಮಾರ್ ಗೋಯಲ್, ಸದಸ್ಯರಾದ ಸುಧೀರ್ ಅಗರ್ ವಾಲ್, ತಜ್ಞ ಸದಸ್ಯ ಎ. ಸೆಂತಿಲ್ವೇಲ್ ಅವರನ್ನೊಳಗೊಂಡ ಪೀಠ ಹೊರಡಿಸಿದೆ. ಸುರತ್ಕಲ್ ಗುಡ್ಡಕೊಪ್ಲದ ಬಳಿ ಸಮುದ್ರ ಮಾಲಿನ್ಯದ ಕುರಿತು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರ ಹೇಳಿಕೆಯನ್ನು ಆಧರಿಸಿದ ಸುದ್ದಿಯ ಹಿನ್ನೆಲೆಯಲ್ಲಿ ಎನ್ಜಿಟಿ ಈ ಆದೇಶ ನೀಡಿದೆ.