ಬಜ್ಪೆ | ದ್ವಿಚಕ್ರ ವಾಹನದಲ್ಲಿ ಡ್ರಗ್ಸ್ ಸಾಗಾಟ ಪತ್ತೆ: ಆರೋಪಿಯ ಬಂಧನ
ಬಜ್ಪೆ, ಮೇ 27: ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪದಲ್ಲಿ ಓರ್ವನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಮಳವೂರು ಗ್ರಾಮದ ಕರಂಬಾರು ನಿವಾಸಿ ಗೋಪಾಲಕೃಷ್ಣ ಅಲಿಯಾಸ್ ಗೋಪಾಲ್( 45) ಬಂಧಿತ ಆರೋಪಿಯಾಗಿದ್ದಾನೆ. ಈತ ಸಂಚರಿಸುತ್ತಿದ್ದ : ದ್ವಿಚಕ್ರ ವಾಹನದ ಸೀಟಿನ ಅಡಿಭಾಗದಲ್ಲಿ ಬಚ್ಚಿಟ್ಟಿದ್ದ ಸುಮಾರು 7,500 ಮೌಲ್ಯದ ಎಂಒಎಂಎ (ಶ್ರೀನೈಟ್) ಮಾದಕ ವಸ್ತು ಜೊತೆಗೆ 50 ಸಾವಿರ ರೂ. ಮೌಲ್ಯದ ಸ್ಕೂಟರ್, ಸಣ್ಣ ತೂಕದ ತಕ್ಕಡಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಜ್ಪೆ ಪೊಲೀಸರು ಕರಂಬಾರು ಬಳಿ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಆರೋಪಿ ಗೋಪಾಲಕೃಷ್ಣನಿಗೆ ವಾಹನ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ವೇಳೆ ಆತ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಬೆನ್ನಟ್ಟಿದ ಪೊಲೀಸರು ಆತನನ್ನು ದಸ್ತಗಿರಿ ಮಾಡಿ ಸ್ಕೂಟರ್ ನ್ನು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ ಮಾದಕ ವಸ್ತು ಇರುವುದು ಪತ್ತೆಯಾಗಿದೆ. ಬಳಿಕ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಮೇಲೆ ಈ ಹಿಂದೆ ಮಂಗಳೂರು ಗ್ರಾಮಾಂತರ, ಕಾವೂರು, ಪುತ್ತೂರು ಠಾಣೆಗಳಲ್ಲಿ 4 ಗಾಂಜಾ ಮಾರಾಟ ಮತ್ತು ಕಳವಿಗೆ ಸಂಬಂಧಿಸಿದ ಪ್ರಕರಣಗಳು ದಾಖಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಮಾರ್ಗದರ್ಶನದಂತೆ, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿ ಹರಿರಾಮ್ ಶಂಕರರ್, ಕ್ರೈಮ್ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್. ಮಹೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ(ಪ್ರಭಾರ) ರಾಘವ ಪಡೀಲ್ , ಪಿಎಸ್ಸೈಗಳಾದ ಪೂವಪ್ಪ, ಗುರಪ್ಪ, ಕಾಂತ ಕಮಲ ರಾಮ ಪೂಜಾರಿ ಮೇರೆಮಜಲು, ಸಂತೋಷ ಡಿ.ಕೆ. ಸುಳ್ಯ, ರಶೀದ್ ಶೇಖ್, ದಾಜೇಶ್, ಹೊನ್ನಪ್ಪ ಗೌಡ, ದಯಾನಂದ, ಸಂಜೀವ ಭಜಂತ್ರಿ, ರವಿ ಕುಮಾರ್ ಮತ್ತು ರವೀಂದ್ರ ನಡೆಸಿರುವುದಾಗಿ ಪೊಲೀಸ್ ಪ್ರಕಟನೆ ತಿಳಿಸಿದೆ.