ನೆಲ್ಯಾಡಿಯಲ್ಲಿ ಸರಣಿ ಅಪಘಾತ; ಓರ್ವ ಮೃತ್ಯು
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಟಿಪ್ಪರ್, ಇಕೋ ಹಾಗೂ ಲಾರಿಯೊಂದರ ಮಧ್ಯೆ ನಡೆದ ಸರಣಿ ಅಪಘಾತದಲ್ಲಿ ಈಕೋ ಚಾಲಕ ಮೃತಪಟ್ಟು ಮತ್ತೋರ್ವ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಈಕೋ ಚಾಲಕ, ಶಿರಾಡಿ ಗ್ರಾಮದ ಶಿರ್ವತ್ತಡ್ಕ ನಿವಾಸಿ ನೆಲ್ಸನ್ (42) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಈಕೋದಲ್ಲಿದ್ದ ಶಿರಾಡಿ ನಿವಾಸಿ ಫೆಲಿಕ್ಸ್ ಎಂಬವರು ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ. ಈಕೋ ಕಾರು ನೆಲ್ಯಾಡಿಯಿಂದ ಶಿರಾಡಿಗೆ ಹೋಗುತ್ತಿದ್ದು ಮಣ್ಣಗುಂಡಿಯಲ್ಲಿ ಕಲ್ಲಿದ್ದಲು ಸಾಗಾಟದ ಲಾರಿಯೊಂದನ್ನು ಓವರ್ಟೇಕ್ ಮಾಡುವ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಟಿಪ್ಪರ್ ಗೆ ಢಿಕ್ಕಿಯಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಈಕೋ ಚಾಲಕ ನೆಲ್ಸನ್ ಅವರನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
Next Story