ಉಡುಪಿ: ಮೇ 31ಕ್ಕೆ ವೃತ್ತಿನಿರತ ಯಕ್ಷಗಾನ ಕಲಾವಿದರ 24ನೇ ಸಮಾವೇಶ
ಉಡುಪಿ, ಮೇ 28: ಉಡುಪಿಯ ಯಕ್ಷಗಾನ ಕಲಾರಂಗ ವೃತ್ತಿ ಕಲಾವಿದರ ಕ್ಷೇಮ ಚಿಂತನೆಗೆ ರೂಪಿಸಿದ ಅಂಗಸಂಸ್ಥೆ ಯಕ್ಷನಿಯ ಮೂಲಕ ಪ್ರತೀ ವರ್ಷ ಕಲಾವಿದರ ಸಮಾವೇಶವನ್ನು ನಡೆಸಿಕೊಂಡು ಬಂದಿದ್ದು, ಈ ವರ್ಷದ 24ನೇ ಯಕ್ಷನಿ ಸಮಾವೇಶ ಮೇ 31ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಯಕ್ಷನಿ ಸಮಾವೇಶ ಮಂಗಳವಾರದಂದು ಇಡೀ ದಿನದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಅಪರಾಹ್ನ 2:00ಕ್ಕೆ ಸಮಾವೇಶವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಉಪಸ್ಥಿತರಿರುವರು.
ಉದ್ಯಮಿ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹಾಗೂ ಶಾಸಕ ಕೆ. ರಘುಪತಿ ಭಟ್ ಉಪಸ್ಥಿತರಿರುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ ಶುಭಾಶಂಸನೆಗೈಯಲಿದ್ದು, ಅತಿಥಿಗಳಾಗಿ ಆನಂದ ಸಿ. ಕುಂದರ್, ಹಾರಾಡಿ ನಿತ್ಯಾನಂದ ಶೆಟ್ಟಿ, ಸಿಎ ಗಣೇಶ್ ಕಾಂಚನ್, ಡಾ.ಚಂದ್ರಶೇಖರ ದಾಮ್ಲೆ, ಎಂ. ಕೆ. ಭಟ್ ಹಾಗೂ ಕರುಣಾಕರ ಸಾಲಿಯಾನ್ ಭಾಗವಹಿಸಲಿದ್ದಾರೆ.
ಅದೇ ದಿನ ಬೆಳಗ್ಗೆ 9:00ರಿಂದ 11:30ರವರೆಗೆ ಕಲಾವಿದರ ಆರೋಗ್ಯ ತಪಾಸಣೆ ನಡೆಯಲಿದೆ. ಬಳಿಕ 11:30ರಿಂದ 1:00ಗಂಟೆಯವರೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ‘ಪ್ರಸ್ತುತ ಯಕ್ಷಗಾನದ ಅವಲೋಕನ’ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗ ಸಂಸ್ಥೆಯ ಪ್ರಕಟಣೆ ತಿಳಿಸಿದೆ.