ಪಾವೂರು: ಉಳಿಯ ದ್ವೀಪಕ್ಕೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಭೇಟಿ
ಹರೇಕಳ ಅಣೆಕಟ್ಟು - ಸೇತುವೆಯಿಂದಾಗಿ ಮುಳುಗಡೆ ಭೀತಿ
ಮಂಗಳೂರು : ಹರೇಕಳ ಅಣೆಕಟ್ಟು - ಸೇತುವೆಯಿಂದಾಗಿ ಮುಳುಗಡೆ ಭೀತಿ ಎದುರಿಸುತ್ತಿರುವ ಪಾವೂರು ಗ್ರಾಮದ ಉಳಿಯ ದ್ವೀಪಕ್ಕೆ ರಾಜ್ಯ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅವರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಂತರ ಯು.ಟಿ.ಖಾದರ್ ಅವರು ಉಳಿಯ ಪ್ರದೇಶದ ಚರ್ಚ್ ಗೆ ಭೇಟಿ ನೀಡಿ, ಚರ್ಚ್ ನ ಮುಖ್ಯ ಗುರುಗಳು ಹಾಗೂ ಸ್ಥಳೀಯರ ಅಹವಾಲು ಸ್ವೀಕರಿಸಿದರು.
ಈ ಸಂದರ್ಭ ಅಣೆಕಟ್ಟುನಿಂದ ದ್ವೀಪಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಮತ್ತು ಉಳಿಯ ಪ್ರದೇಶದ ಜನರ ಓಡಾಟದ ಅನುಕೂಲಕ್ಕಾಗಿ ಪಾದಚಾರಿ ಸೇತುವೆ ನಿರ್ಮಾಣದ ಕುರಿತು ಸಮೀಕ್ಷೆ ನಡೆಸಲು ಯು.ಟಿ. ಖಾದರ್ ಸೂಚನೆ ನೀಡಿದರು.
ಈ ಬಗ್ಗೆ ಅತೀ ಶೀಘ್ರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ತಂಡ ಕೂಡಾ ಉಳಿಯ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಮಂಗಳೂರು ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಮೊಹಮ್ಮದ್ ಮೋನು, ಪಾವೂರು ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪಾವೂರು ಗ್ರಾಮ ಪಂಚಾಯತ್ ಸದಸ್ಯರಾದ ರಿಯಾಝ್ ಗಾಡಿಗದ್ದೆ, ರವಿಕಲಾ, ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರದ್ದೀನ್, ಹರೇಕಳ ಗ್ರಾಮ ಪಂಚಾಯತ್ ಸದಸ್ಯರಾದ ಮಜೀದ್, ಸತ್ತಾರ್, ಕಾಂಗ್ರೆಸ್ ಮುಖಂಡರಾದ ಮುಸ್ತಫಾ ಹರೇಕಳ, ಝಕರಿಯಾ ಮಲಾರ್, ಪಾವೂರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹನೀಫ್ ಕೆ.ಎಮ್, ಪಾವೂರು ಯುವ ಕಾಂಗ್ರೆಸ್ ಅಧ್ಯಕ್ಷ ಇರ್ಫಾನ್ ಮಲಾರ್, ಕ್ಯಾನೆಟ್ ಡಿಸಿಲ್ವ, ಗಿಲ್ಬರ್ಟ್ ಮುಂತಾದವರು ಉಪಸ್ಥಿತರಿದ್ದರು.