ಚರಣ್ ರಾಜ್ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ನಡೆದ ಚರಣ್ ರಾಜ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನರ್ಮೆಶ್ ರೈ (28) ನಿತಿಲ್ ಶೆಟ್ಟಿ(23) ಮತ್ತು ವಿಜೇಶ್ (23) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಕೃತ್ಯ ನಡೆದ ಬಳಿಕ ಆರೋಪಿಗಳು ಕೆಯ್ಯೂರು ಗ್ರಾಮದ ಪಲ್ಲತ್ತಡ್ಕದ ಮನೆಯೊಂದರಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ರವಿವಾರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕೃತ್ಯ ನಡೆಸಿದ ತಂಡದಲ್ಲಿ ಒಟ್ಟು ಆರು ಮಂದಿ ಇದ್ದರು ಎಂದು ಶಂಕಿಸಲಾಗಿದ್ದು, ಉಳಿದವರ ಶೋಧ ಕಾರ್ಯ ನಡೆಯುತ್ತಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಎಸ್ಪಿ ಸೋನಾವನೆ ಋಷಿಕೇಶ್, ಡಿವೈಎಸ್ಪಿ ಗಾನಾ ಕುಮಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಬೆಳ್ಳಾರೆ ಎಸ್ ಐ ರುಕ್ಮ ನಾಯ್ಕ್, ಸಂಪ್ಯ ಗ್ರಾಮಾಂತರ ಎಸ್ಐ ಉದಯರವಿ ನೇತೃತ್ವದ ತಂಡ ಕೊಲೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.