ಮಂಗಳೂರು | ಈ.ಡಿ. ದುರ್ಬಳಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಪೊಲೀಸರಿಂದ ತಡೆ, ಬಂಧನ
ಮಂಗಳೂರು, ಜೂ.17: ದಿಲ್ಲಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ.ಡಿ.ಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ ಮತ್ತು ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬೆಳಗ್ಗೆ ಮಂಗಳೂರಿನ ಫಳ್ನೀರ್ ಎಸ್.ಎಲ್ ಮಥಾಯಿಸ್ ಪಾರ್ಕ್ ನಿಂದ ಅತ್ತಾವರದ ಐ.ಟಿ. ಕಚೇರಿ ವರೆಗೆ ಪಾದೆಯಾತ್ರೆ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಪ್ರತಿಭಟನಾಕಾರರನ್ನು ಅತ್ತಾವರ ಕಟ್ಟೆಯ ಬಳಿ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಕಾಂಗ್ರೆಸ್ ಸಂಸದರು ಮತ್ತು ಎಐಸಿಸಿ ನಾಯಕರು ಪ್ರತಿಭಟನೆ ಮಾಡುವುದನ್ನು ಹತ್ತಿಕ್ಕಲು ಪ್ರತಿಭಟನೆಗೆ ಅವಕಾಶ ನೀಡದೆ ಎಐಸಿಸಿ ಕಚೇರಿ ಆವರಣದಲ್ಲಿಯೇ ಬಂಧಿಸುವ ಮೂಲಕ ಕೇಂದ್ರ ಸರ್ಕಾರ ಮತ್ತು ಪೊಲೀಸರು ಸಂವಿಧಾನದತ್ತ ಹಕ್ಕನ್ನು ಮೊಟುಕಗೊಳಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಅತ್ತಾವರ (ಆನಂದ ಶೆಟ್ಟಿ)ಕಟ್ಟೆಯ ಬಳಿ ಪೊಲೀಸರು (ಬ್ಯಾರಿಕೇಡ್ )ತಡೆ ಬೇಲಿಯೊಂದಿಗೆ ತಡೆದರು. ಈ ಸಂದರ್ಭ ಕೆಲವರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಡೆ ಬೇಲಿ ದಾಟಲು ಯತ್ನಿಸಿದರು. ಇನ್ನೂ ಕೆಲವರು ಸ್ಥಳದಲ್ಲಿ ಧರಣಿ ನಡೆಸಲು ಮುಂದಾದರು. ಈ ವೇಳೆ ಪಕ್ಷದ ಮುಖಂಡರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಡಾ.ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ಪಕ್ಷದ ಇತರ ಮುಖಂಡರಾದ ಮಿಥುನ್ ರೈ, ಸದಾಶಿವ ಉಳ್ಳಾಲ್, ಪ್ರಶಾಂತ್ ಕಾಜವ, ಸಲಿಂ, ಪ್ರಕಾಶ್ ಸಾಲ್ಯಾನ್, ಸುರೇಂದ್ರ ಕಾಂಬ್ಳಿ, ಬೇಬಿ ಪೂಜಾರಿ, ಸುದೀಪ್ ಶೆಟ್ಟಿ, ಸುಧೀರ್ ಶೆಟ್ಟಿ, ವಿಶ್ವನಾಥ್ ರೈ, ಡಾ.ರಾಜಾರಾಮ್, ಕವಿತಾ ಸನಿಲ್, ಪ್ರತಿಭಾ ಕುಳಾಯಿ, ಲಾವಣ್ಯ ಬಲ್ಲಾಳ್, ಲುಕ್ಮಾನ್ ಬಂಟ್ವಾಳ್, ಸವಾದ್ ಸುಳ್ಯ, ಲಾರೆನ್ಸ್ ಡಿಸೋಜ, ಡಾ.ಶೇಖರ್ ಪೂಜಾರಿ, ಶೇಖರ್ ಕುಕ್ಕೇರಿ, ಶಾಲೆಟ್ ಪಿಂಟೋ, ಮಮತಾ ಗಟ್ಟಿ, ಎನ್.ಎಸ್.ಕರೀಂ, ಚಂದ್ರಹಾಸ್ ಕರ್ಕೇರ, ಎಂ.ಎಸ್. ಮುಹಮದ್, ಅಬ್ಬಾಸ್ ಅಲಿ, ಪುರುಷೋತ್ತಮ್ ಚಿತ್ರಾಪುರ, ಚಂದ್ರಪ್ರಭಾ ಚಿಳ್ತಾಡ್ಕ, ಶಶಿಧರ್ ಹೆಗ್ಡೆ, ಲ್ಯಾನ್ಸಿ ಲಾಟ್ ಪಿಂಟೋ, ಜಸಿಂತಾ ಆಲ್ಫ್ರೆಡ್, ಅಬ್ದುಲ್ ರವೂಫ್, ಅಬ್ದುಲ್ ಲತೀಫ್, ಶುಭೋದಯ ಆಳ್ವ, ನವೀನ್ ಡಿಸೋಜ, ಪ್ರವೀಣ್ ಆಳ್ವ, ಅನಿಲ್ ಕುಮಾರ್, ಟಿ.ಕೆ.ಸುಧೀರ್, ನೀರಜ್ ಪಾಲ್, ಅಪ್ಪಿ, ನಝೀರ್ ಬಜಾಲ್, ಅಬ್ದುಲ್ ರಹ್ಮಾನ್ ಪಡ್ಪು, ರಮಾನಂದ ಪೂಜಾರಿ, ಅನ್ವಿತ್ ಕಟೀಲ್, ಮುಸ್ತಫ, ದಿನೇಶ್ ಕುಂಪಲ, ಸುಹಾನ್ ಆಳ್ವ ಚಿತ್ತರಂಜನ್ ಶೆಟ್ಟಿ ಇತರ ಪದಾಧಿಕಾರಿಗಳು, ಕಾರ್ಯ ಕರ್ತರು ಉಪಸ್ಥಿತರಿದ್ದರು.