ಪಡುಬಿದ್ರಿ: ಕಾಮಿನಿ ನದಿಯಲ್ಲಿ ಮೀನುಗಳು ಸಾವು
ಪಡುಬಿದ್ರಿ: ಪಡುಬಿದ್ರಿಯ ಕಾಮಿನಿ ನದಿಯ ನೀರು ಕಲುಷಿತಗೊಂಡ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಸಾವನ್ನಪ್ಪಿದ್ದು, ಆತಂಕಕ್ಕೆ ಕಾರಣವಾಗಿದೆ.
ಎರಡು ದಿನಗಳ ಹಿಂದೆ ಬಂದ ಮಳೆಯ ಬಳಿಕ ಹೊಳೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿ ಕಲುಷಿತಗೊಂಡಿದೆ. ಪಂಜರದಲ್ಲಿ ಸಾಕುವ ಮೀನುಗಳು ಹಾಗೂ ಹೊಳೆಯಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಮೀನುಗಳು ಸತ್ತು ಹೋಗಿವೆ. ಪರಿಸರದಾದ್ಯಂತ ದುರ್ವಾಸನೆಯಿಂದ ಕೂಡಿದೆ. ಅಲ್ಲದೆ ಹೊಳೆಯ ನೀರು ಕೃಷಿ ಭೂಮಿಗೂ ಆವರಿಸಿರುವುದರಿಂದ ಕೃಷಿ ಭೂಮಿಗೂ ಹಾನಿಯಾಗಿದೆ. ಈ ಭಾಗದಲ್ಲಿ ಇರುವ ಹೆಚ್ಚುತ್ತಿರುವ ಕೈಗಾರಿಕೆ ಗಳಿಂದಾಗಿ ಅಲ್ಲಿ ಹೊರಬಿಡುವ ರಾಸಾಯನಿಕ ಮಿಶ್ರಿತ ನೀರಿನಿಂದ ಮೀನುಗಳು ಸತ್ತುಹೋಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ನೇಹಿತ್, ನಾನು ಮತ್ತು ನಿತಿನ್ ಅವರ ಎರಡು ತಂಡವಾಗಿ 15 ಮಂದಿ ಕಾಡಿಪಟ್ಣ ಹಾಗೂ ನಡಿಪಟ್ಣದ ಜಾರಂದಾಯ ಸಾನದ ಬಳಿ ಪಂಜರದಲ್ಲಿ ಮೀನು ಸಾಕಾಣಿಕೆ ಆರಂಭಿಸಿದ್ದೆವು. ಪಂಜರಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿದ್ದು, ವಿದೇಶಗಳಿಗೆ ರಫ್ತು ಮಾಡಲಾಗುವ ಮುಡಾವು, ಕ್ಯಾವೇಜ್ ಮೀನುಗಳು ಸಾಕುತಿದ್ದೆವು. ಈ ಎರಡು ದಿನಗಳ ಹಿಂದೆ ಸುಮಾರು ಒಬಂತ್ತು ಟನ್ ಮೀನುಗಳು ಸತ್ತುಹೋಗಿವೆ. ಅಲ್ಲದೆ ಹೊಳೆಯಲ್ಲಿರುವ ಪಯ್ಯಾ, ಕಾನೆ, ಕ್ಯಾವೇಜ್, ಮಾಲ, ಇರ್ಪೆ, ತೆಬೇರಿ ಮೀನುಗಳು ಸತ್ತು ಹೋಗಿವೆ.
ಇದರಿಂದ ನಮಗೆ 22ಲಕ್ಷಕ್ಕೂ ಅಧಿಕ ನಷ್ಟ ನಾವು ಹೊಂದಿದ್ದೇವೆ. ಕಂಪೆನಿಗಳಿಂದ ಹೊರ ಬಿಡುವ ಕೆಮಿಕಲ್ ಗಳಿಂದ ಮೀನುಗಳ ಮಾರಣ ಹೋಮವಾಗಿದೆ. ಇಲಾಖೆ ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಜಾರಂದಾಯ ದೈವಸ್ಥಾನದ ಪ್ರಧಾನ ಅರ್ಚಕ ಸುಧಾಕರ ಪೂಜಾರಿ ಮಾತನಾಡಿ, ನಾಲ್ಕು ವರ್ಷಗಳಿಂದ ನದಿಯ ನೀರು ಹಾಳಾಗುತ್ತಿವೆ. ಈ ಪ್ರದೇಶ ಮುಟ್ಟಳಿವೆಯಾಗಿದ್ದು, ಹೊಳೆಯ ನೀರು ಸಮುದ್ರಕ್ಕೆ ಸೇರುವಂತೆ ಮಾಡಲು ಕಡಿಯಲಾಗುತ್ತದೆ. ಈ ವೇಳೆ ರಾಸಾಯನಿಕ ಮಿಶ್ರಿತ ನೀರುಗಳು ಬೆರೆತುಕೊಳ್ಳುತ್ತವೆ. ಕೃಷಿ ಭೂಮಿಗೂ ನೀರು ಬಂದು ಕೃಷಿಗೂ ಹಾನಿಯಾಗಿವೆ. ಈ ಬಗ್ಗೆ ಗ್ರಾಮ ಪಂಚಾಯತ್ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ.
ಪ್ರತೀ ಮಳೆಗಾಲದಲ್ಲಿ ಈ ಪ್ರಸ್ತುತ ಪರಿಸ್ಥಿತಿ ಎದುರಾಗುತಿದ್ದು, ರಾಸಾಯನಿಕ ರೀತಿಯ ವ್ಯಾಜ್ಯಗಳು ನದಿಗೆ ಬಿಡುವುದರಿಂದ ಇಂತಹ ಘಟನೆಗಳು ನಡೆಯುತ್ತಿದೆ. ಇದರಿಂದಾಗಿ ಮೀನುಗಳು ಮಾರಣಹೋಮವಾಗಿವೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲಿ ನೈಸರ್ಗಿಕ ಸಂಪತ್ತು ಕಲೆಗುಂದಿ ನಶಸಿಸುವ ಹಂತಕ್ಕೆ ತಲುಪುತ್ತವೆ ಎನ್ನುತ್ತಾರೆ ಮೀನುಗಾರರು.