ಮೂಳೂರಿನಲ್ಲಿ ಕಡಲ್ಕೊರೆತ: ಆತಂಕದಲ್ಲಿ ಸ್ಥಳೀಯ ನಿವಾಸಿಗಳು
ಕಾಪು : ಕೆಲವು ದಿನಗಳಿಂದ ಜೋರಾಗಿ ಸುರಿಯುತ್ತಿರುವ ಮಳೆಯಿಂದ ಕಾಪು ಕಾಪು ಪುರಸಭಾ ವ್ಯಾಪ್ತಿಯ ಮೂಳೂರು ತೊಟ್ಟಂ ಕಡಲ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.
ಪಡುಬಿದ್ರಿ, ಹೆಜಮಾಡಿ, ತೆಂಕ ಎರ್ಮಾಳು, ಬಡಾ ಉಚ್ಚಿಲ, ಕಾಪು ಪರಿಸರದಲ್ಲಿ ಕಡಲ್ಕೊರೆತ ಭೀತಿ ಉಂಟಾಗಿದ್ದು, ಈ ಭಾಗದಲ್ಲಿ ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ.
ಮೂಳೂರಿನ ತೊಟ್ಟಂನಲ್ಲಿ ಈಗಾಗಲೇ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಕಡಲ್ಕೊರೆತ ತಡೆಗೆ ಹಾಕಲಾದ ತಡೆಗೋಡೆ ಸಮುದ್ರದ ಒಡಲು ಸೇರುತ್ತಿದೆ. ಈ ಭಾಗದಲ್ಲಿ ತುರ್ತಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಾಣವಾಗದಿದ್ದಲ್ಲಿ ಇನ್ನಷ್ಟು ಭೂ ಪ್ರದೇಶ ಮತ್ತು ತೆಂಗಿನ ಮರಗಳು ಸಮುದ್ರಕ್ಕೆ ಆಹುತಿಯಾಗುವ ಭೀತಿ ಎದುರಾಗಿದೆ.
ಪುರಸಭಾ ವ್ಯಾಪ್ತಿಯ ಮೂಳೂರು ತೊಟ್ಟಂ ವಾರ್ಡ್ನ ಸುನಂದಾ ಪೂಜಾರ್ತಿ, ದೇವಿಪ್ರಸಾದ್, ಬಾಬು ಶೆಟ್ಟಿ ಅವರ ಮನೆ ಬಳಿ ಹಾಗೂ ಖಾಸಗಿ ಗೆಸ್ಟ್ ಹೌಸ್ ಬಳಿ ಕಡಲ್ಕೊರೆತ ತೀವ್ರ ಗೊಂಡಿದೆ. ಈ ಭಾಗದ ನಿವಾಸಿಗಳು ಆತಂಕಿತರಾಗಿದ್ದು, ಕೂಡಲೇ ತಡೆಗೋಡೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.