ದ.ಕ.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸರ್ವ ಸನ್ನದ್ಧ: ಡಿಸಿ ಡಾ. ರಾಜೇಂದ್ರ
ಮಂಗಳೂರು : ದ.ಕ.ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದ ಸೃಷ್ಟಿಯಾಗುತ್ತಿರುವ ಪ್ರಕೃತಿ ವಿಕೋಪವನ್ನು ಎದುರಿಸಲು ದ.ಕ.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸರ್ವ ಸನ್ನದ್ಧವಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆ ಮತ್ತು ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಕೂಡ ವಿಕೋಪ ಎದುರಿಸಲು ತಂಡ ಸಜ್ಜಾಗಿದೆ. ಈಗಾಗಲೆ ಮಂಗಳೂರು ತಾಲೂಕಿನಲ್ಲಿ ಎನ್ಡಿಆರ್ಎಫ್ (೨೦ ಮಂದಿ) ಮತ್ತು ಎಸ್ಡಿಆರ್ಎಫ್ (೬೭ ಮಂದಿ) ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಅಲ್ಲದೆ ಅಗ್ನಿಶಾಮಕ ದಳದ ೧೨೦ ಸಿಬ್ಬಂದಿಗಳಲ್ಲದೆ ಎಲ್ಲಾ ತಾಲೂಕುಗಳಲ್ಲೂ ಗೃಹರಕ್ಷಕ ದಳದ ತಲಾ ಒಂದೊಂದು ತಂಡವನ್ನು ಸಜ್ಜುಗೊಳಿಸಲಾಗಿದೆ.
ಮಂಗಳೂರಿನಲ್ಲಿ ೨೧, ಬಂಟ್ವಾಳದಲ್ಲಿ ೧೧, ಪುತ್ತೂರಿನಲ್ಲಿ ೭, ಬೆಳ್ತಂಗಡಿಯಲ್ಲಿ ೨೪, ಸುಳ್ಯದಲ್ಲಿ ೮, ಮುಲ್ಕಿಯಲ್ಲಿ ೭, ಕಡಬದಲ್ಲಿ ೬, ಮುಲ್ಕಿಯಲ್ಲಿ ೪ ಸಹಿತ ಜಿಲ್ಲಾದ್ಯಂತ ಒಟ್ಟು ೮೮ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.