ಅಕ್ರಮ ಗೋ ಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಬಳಕೆ: ಶಾಸಕ ಡಾ.ಭರತ್ ಶೆಟ್ಟಿ ಎಚ್ಚರಿಕೆ
ಸುರತ್ಕಲ್, ಜು.6: ಅಕ್ರಮವಾಗಿ ಗೋ ಹತ್ಯೆ, ಗೊವುಗಳ ಕಳವು ಅಪರಾಧ ಪ್ರಕರಣ ಮಟ್ಟ ಹಾಕಲು ಆರೋಪಿಗಳ ಆಸ್ತಿ ಮುಟ್ಟು ಗೋಲು ದಂಡನಾಸ್ತ್ರ ಬಳಸಲಾಗುವುದು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರೋಪ ರುಜುವಾತಾದರೆ ಅಂತಹವ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಪ್ರಯೋಗಿಸುವಂತೆ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ಹೇಳಿದ್ದಾರೆ.
ಪೊಲೀಸರು ಅಕ್ರಮ ಗೋ ಹತ್ಯೆ, ಗೊವುಗಳ ಕಳವು ಪ್ರಕರಣ ದಾಖಲಿಸಿದ ಕೂಡಲೇ ಕಂದಾಯ ಇಲಾಖೆ ತಕ್ಷಣ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಬೇಕಾದ ಕ್ರಮ ಕೈಗೊಳ್ಳಬೇಕು ಎಂದು ಡಾ.ಭರತ್ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯ ಸರಕಾರದ ನೂತನ ಗೋ ಹತ್ಯೆ ಕಾಯ್ದೆಯಲ್ಲಿ ಗೋ ಕಳ್ಳತನ, ಅಕ್ರಮ ಕಸಾಯಿಖಾನೆ ನಡೆಸುವುದು, ಅಕ್ರಮ ಗೋ ಸಾಗಾಟ ಮಾಡುವ ಆರೋಪಿಗಳ ಆಸ್ತಿ ಮುಟ್ಟು ಗೋಲು ದಂಡನಾಸ್ತ್ರ ಕಾಯ್ದೆಯನ್ನು ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆದೇಶ ನೀಡಿದ್ದಾರೆ.
ಹೈನುಗಾರಿಕೆ ನಡೆಸಿ ಜೀವನ ನಡೆಸುವವರ ಹಟ್ಟಿಯಿಂದ ದನ ಕಳ್ಳತನ ಮಾಡುವುದು, ಬೀಡಾಡಿ ದನಗಳ ಕದ್ದು ಹತ್ಯೆ ಮಾಡುವುದು ಯಾವುದೇ ಕಾರಣಕ್ಕೂ ಸಹಿಸಲಾಗದು. ಬಡವರ, ರೈತರ ಅನ್ನವನ್ನು ಕಸಿಯುವ ಕೆಲಸ ಯಾರೂ ಮಾಡಬಾರದು ಎಂದು ತಿಳಿಸಿದ್ದಾರೆ.