ನಂದಿಕೂರು: ಹೊಂಡಬಿದ್ದ ರಸ್ತೆಗೆ ಬಾಳೆಗಿಡನೆಟ್ಟು ಪ್ರತಿಭಟನೆ
ಪಡುಬಿದ್ರಿ: ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಂದಿಕೂರು ರೈಲ್ವೆ ಸೇತುವೆಯಲ್ಲಿ ಹೊಂಡಬಿದ್ದಿದ್ದು, ರವಿವಾರ ಡೈರಿಗೆ ಹಾಲು ತರುವ ವ್ಯಕ್ತಿಯೊಬ್ಬರು ಬಿದ್ದು ಹಾಲೆಲ್ಲ ರಸ್ತೆಗೆ ಚೆಲ್ಲಿದ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಬಾಳೆಗಿಡನೆಟ್ಟು ಪ್ರತಿಭಟನೆ ನಡೆಸಿದರು.
ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ರೈಲ್ವೇ ಮೇಲ್ಸೇತುವೆಯಲ್ಲಿ ಪದೇ ಪದೇ ಹೊಂಡಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದು, ಮಳೆಗಾಲ ಆರಂಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹೊಂಡ ಮುಚ್ಚುವ ಕಾರ್ಯ ನಡೆಸಲಾಗಿದೆ. ಇದೀಗ ಮತ್ತೆ ಬೃಹತ್ ಗಾತ್ರದ ಹೊಂಡ ಬಿದ್ದು ಸಂಚಾರಕ್ಕೆ ತೊಡಕಾಗಿದೆ.
ಮಳೆಯಿಂದ ಸೇತುವೆಯಲ್ಲಿ ನೀರು ಕೂಡಾ ಸಮರ್ಪಕವಾಗಿ ಹರಿಯದೆ ಹೊಂಡದಲ್ಲಿ ನಿಂತು ಜನ ಹಾಗೂ ವಾಹನ ಸಂಚಾರಿಗಳಿಗೆ ಅಪಾಯವನ್ನು ತಂದೊಡ್ಡುತ್ತಿದೆ. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಬಾಳೆಗಿಡ ನೆಟ್ಟು ಅಸಮಾಧಾನ ಹೊರಹಾಕಿದ್ದಾರೆ. ಇದೇ ರೀತಿ ಅಡ್ವೆ ಕಿರು ಸೇತುವೆಯಲ್ಲಿಯೂ ಹೊಂಡ ಬಿದ್ದಿದ್ದು ಅಪಾಯಕ್ಕೆ ಕಾರಣವಾಗುತ್ತಿದೆ.
Next Story