ಫಾಝಿಲ್ ಹತ್ಯೆ ಪ್ರಕರಣ; ಆರೋಪಿಗಳಿಗೆ ಪೊಲೀಸ್ ಕಸ್ಟಡಿ: ಕಮಿಷನರ್ ಶಶಿಕುಮಾರ್
ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು ಮಹಜರು
ಅಜಿತ್ ಕ್ರಾಸ್ತ, ಶ್ರೀನಿವಾಸ್, ಮೋಹನ್, ದೀಕ್ಷಿತ್
ಗಿರಿಧರ್, ಅಭಿಷೇಕ್, ಸುಹಾಸ್
ಮಂಗಳೂರು: ಸುರತ್ಕಲ್ನಲ್ಲಿ ನಡೆದ ಮುಹಮ್ಮದ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧಿಸಲ್ಪಟ್ಟ ಆರು ಮಂದಿ ಆರೋಪಿಗಳಿಗೆ ಮಂಗಳೂರು ನ್ಯಾಯಾಲಯವು ಆ.15ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಗಳಾದ ಸುಹಾಸ್ ಶೆಟ್ಟಿ, ಮೋಹನ್ ಆಲಿಯಾಸ್ ಮೋಹನ್ ಸಿಂಗ್, ಗಿರಿಧರ್, ಅಭಿಷೇಕ್, ಶ್ರೀನಿವಾಸ್, ದೀಕ್ಷಿತ್ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚುವರಿ ಮಾಹಿತಿ ಕಲೆ ಹಾಕುವ ಸಲುವಾಗಿ ಎರಡು ವಾರಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಕೇಳಿಕೊಳ್ಳಲಾಗಿತ್ತು. ಅದರಂತೆ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ಆರೋಪಿಗಳಿಗೆ ಕಾರು ಬಾಡಿಗೆಗೆ ನೀಡಿದ್ದ ಆರೋಪಿ ಅಜಿತ್ ಕ್ರಾಸ್ತಾನನ್ನು ಈಗಾಗಲೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಬುಧವಾರ ಎಲ್ಲಾ ಆರೋಪಿಗಳನ್ನೂ ಕೂಡ ಘಟನೆ ನಡೆದ ಸ್ಥಳಗಳಿಗೆ ಕರೆದೊಯ್ದು ಮಹಜರು ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿತ್ತು. ಬಂಧಿತ ಆರೋಪಿಗಳನ್ನು ಮಂಗಳವಾರವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.