ಫಾಝಿಲ್ ಕೊಲೆ ಪ್ರಕರಣ; ಡಿವೈಎಫ್ಐನಿಂದ ಜಾಗೃತಿ ಅಭಿಯಾನ
ಮಂಗಳೂರು, ಆ.7: ಸುರತ್ಕಲ್ನಲ್ಲಿ ದುಷ್ಕರ್ಮಿಗಳಿಂದ ನಡೆದ ಮಂಗಳಪೇಟೆಯ ಫಾಝಿಲ್ ಕೊಲೆಗೆ ಸಂಬಂಧಿಸಿ ಸರಕಾರ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಖಂಡಿಸಿ ಡಿವೈಎಫ್ಐ ರವಿವಾರ ‘ಜಾಗೃತಿ ಅಭಿಯಾನ’ ನಡೆಸಿತು.
ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಫಾಝಿಲ್ ಕೊಲೆಗೆ ಸಂಬಂಧಿಸಿ ಸರಕಾರ ನಿಯಮ ಪಾಲಿಸಿಲ್ಲ. ಕೋಮು ದ್ವೇಷದಿಂದ ಕೊಲೆಯಾದ ಪ್ರವೀಣ್ ಕುಟುಂಬಕ್ಕೆ ಪರಿಹಾರ ಧನ ನೀಡಿದೆ. ಆದರೆ ಫಾಝಿಲ್ ಕುಟುಂಬಕ್ಕೆ ನೀಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಶಾಸಕರು ಮಾತಾಡದೆ ಮೌನ ವಹಿಸಿದ್ದಾರೆ. ಜಿಲ್ಲಾಡಳಿತ ಕೂಡ ಕರ್ತವ್ಯ ಮರೆತಿದೆ ಎಂದು ತಿಳಿಸಿದ್ದಾರೆ.
ಫಾಝಿಲ್, ಮಸೂದ್ ಮನೆಗೆ ಶಾಸಕರು ಸಾಂತ್ವನದ ಭೇಟಿ ನೀಡಬೇಕು, ಪರಿಹಾರ ಧನ ಒದಗಿಸಬೇಕು, ಪ್ರವೀಣ್ ನೆಟ್ಯಾರು, ಫಾಝಿಲ್ ಕೊಲೆಯ ಹಿಂದಿನ ಸೂತ್ರಧಾರರ ಬಂಧನವಾಗಬೇಕು ಮತ್ತು ರಹಸ್ಯಗಳು ಬಯಲಾಗಬೇಕು. ಧರ್ಮದ ಹೆಸರಿನಲ್ಲಿ ಬಡ ತಾಯಂದಿರ ಮಕ್ಕಳನ್ನು ಕೊಲೆ ಮಾಡಿಸುವ ರಾಜಕಾರಣದ ವಿರುದ್ಧ ಧ್ವನಿ ಎತ್ತಬೇಕು. ಹಿಂದೂ-ಮುಸ್ಲಿಂ ಸೌಹಾರ್ದ ಎತ್ತಿ ಹಿಡಿಯುವ ಸಂದೇಶ ಹರಡಬೇಕು ಎಂದು ಒತ್ತಾಯಿಸಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.