ಮನಪಾದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ನಡಿಗೆ
ಮಂಗಳೂರು, ಆ.12: ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸಂಭ್ರಮದ ನಡಿಗೆ ಕಾರ್ಯಕ್ರಮ ಇಂದು ನಡೆಯಿತು.
ಮಂಗಳೂರು ಮಹಾನಗರಪಾಲಿಕೆ ಕಚೇರಿಯಿಂದ ಹೊರಟು ಲಾಲ್ ಬಾಗ್ ವೃತ್ತ, ಬ್ರಹ್ಮಶ್ರೀ ನಾರಾಯಣ ಗುರು ವೃತ್ತವಾಗಿ ಮಣ್ಣಗುಡ್ಡೆ ಕೆನರಾ ಉರ್ವ ಶಾಲೆ ರಸ್ತೆಯಾಗಿ ಮಂಗಳೂರು ಮಹಾನಗರ ಪಾಲಿಕೆ ಬಳಿ ನಡಿಗೆ ಸಮಾರೋಪಗೊಂಡಿತು.
ನಡಿಗೆಯು ಮೇಯರ್ ಪ್ರೇಮಾನಂದ ಶೆಟ್ಟಿ ನೇತೃತ್ವದಲ್ಲಿ ಜರುಗಿದ್ದು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಉಪ ಮೇಯರ್ ಸುಮಂಗಳಾ ರಾವ್, ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಮುಖ್ಯ ಸಚೇತಕ ಸುಧೀರ್ ಶೆಟ್ಟಿ, ಪಾಲಿಕೆಯ ಎಲ್ಲ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಮತ್ತು ಮುಖ್ಯಸ್ಥರು ಭಾಗವಹಿಸಿದ್ದರು.
ಸಂಭ್ರಮದ ನಡಿಗೆ ಕಾರ್ಯಕ್ರಮದ ಮೊದಲು ಅತಿಥಿಗಳು ಪಾಲಿಕೆ ವತಿಯಿಂದ ಪಿಎಂ ಸ್ವನಿಧಿ ಯೋಜನೆಯಡಿ ಇಬ್ಬರು ಸಾರ್ವಜನಿಕರಿಗೆ ಧನಸಹಾಯದ ಚೆಕ್ ಹಸ್ತಾಂತರಿಸಿದರು. ನಗರದಲ್ಲಿ ಸ್ವಚ್ಚತೆ ಕಾರ್ಯ ಕೈಗೊಳ್ಳುವ ಪಾಲಿಕೆಯ ಪೌರ ಕಾರ್ಮಿಕರಿಗೆ ಮುಖ್ಯಮಂತಿಯವರ ಹಸ್ತಾಕ್ಷರವುಳ್ಳ ಪ್ರಶಂಸನೀಯ ಪತ್ರವನ್ನು ಹಸ್ತಾಂತರಿಸಲಾಯಿತು.