ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರ್ ಅತೀಷ್ ಮನೆಗೆ ಎಎಪಿ ನಿಯೋಗ ಭೇಟಿ
ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಬಿಕರ್ನಕಟ್ಟೆ ಸಮೀಪದ ಕಂಡೆಟ್ಟು ಕ್ರಾಸ್ ಆ.5ರಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರ್ ಅತೀಷ್ ಮನೆಗೆ ಆಮ್ ಆದ್ಮಿ ಪಾರ್ಟಿಯ ದ.ಕ.ಜಿಲ್ಲಾ ಸಮಿತಿಯು ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿತು.
ಇಂತಹ ಅನಾಹುತಗಳಿಗೆ ಕಾರಣರಾದವರನ್ನು ಶಿಕ್ಷಿಸಬೇಕು. ಮುಂದೆ ಇಂತಹ ಬೇಜವಾಬ್ದಾರಿಯ ಕಾಮಗಾರಿ ಗಳು ಎಲ್ಲೂ ಆಗಬಾರದು. ಪ್ರತಿಯೊಬ್ಬ ನಾಗರಿಕರು ಈ ಬಗ್ಗೆ ಜಾಗೃತರಾಗಬೇಕು. ಅವ್ಯವಸ್ಥೆ ಸರಿಯಾಗುವ ತನಕ ವಿಶ್ರಮಿಸಕೂಡದು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಹೇಳಿದರು.
ಬಳಿಕ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಅತೀಷ್ ಸ್ನೇಹಿತ ಲಿಖಿತ್ ರೈ, ಆತಿಷ್ರ ತಂದೆ ಯಶವಂತ ಬಂಗೇರಾ, ಎಎಪಿ ದ.ಕ. ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ, ಖಜಾಂಚಿ ಅವ್ರೆನ್ ಡಿಸೋಜ, ಸಹ ಕಾರ್ಯದರ್ಶಿ ದಿಲೀಪ್ ಲೋಬೊ, ಡೆಸ್ಮಂಡ್ ಡಿಸೋಜ, ರವಿಪ್ರಸಾದ್, ಶಾನನ್ ಪಿಂಟೋ, ಬೆನೆಟ್ ಮೊರಾಸ್, ನವೀನ್ ಡಿಸೋಜ, ಜೇಮ್ಸ್, ರೋನಿ ಕ್ರಾಸ್ತಾ ಉಪಸ್ಥಿತರಿದ್ದರು.
Next Story