ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್ ಚಾಟಿಂಗ್; ಆತಂಕ ಸೃಷ್ಟಿಸಿದ್ದ ‘ಯೂ ಆರ್ ದ ಬಾಂಬರ್’ WhatsApp ಚಾಟ್ !
ಸಿಮ್ರಾನ್ ಟಾಮ್, ದೀಪಯನ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಆ. 15: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಯುವಕ- ಯುವತಿಯಬ್ಬರ ನಡುವೆ ನಡೆದ WhatsApp ಚಾಟ್ ಆತಂಕಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೆ, ಇದರಿಂದಾಗಿ ಮುಂಬೈಗೆ ತೆರಳಬೇಕಿದ್ದ ವಿಮಾನ ಯಾನ ಸುಮಾರು ಮೂರು ಗಂಟೆಗಳ ಕಾಲ ರದ್ದುಗೊಂಡು ಪ್ರಯಾಣಿಕರು ಗೊಂದಲಕ್ಕೀಡಾದ ಪ್ರಕರಣ ನಡೆದಿತ್ತು.
ಸದ್ಯ ಯುವತಿ ಸಿಮ್ರಾನ್ ಟಾಮ್ (23) ಹಾಗೂ ಯುವಕ ದೀಪಯನ್ ಮಾಜಿ(23) ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 505, 1ಬಿ ಮತ್ತು ಸಿಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ವಾಸ್ತವದಲ್ಲಿ ಅಲ್ಲಿ ನಡೆದಿದ್ದೇನು?
ಉತ್ತರ ಪ್ರದೇಶದ ಗಾಝಿಯಾಬಾದ್ ನಿವಾಸಿಗಳಾದ ಸಿಮ್ರಾನ್ ಹಾಗೂ ದೀಪಯನ್ ಕಳೆದ ಮೂರು ದಿನಗಳ ಹಿಂದೆ ಉಡುಪಿಯ ಮಣಿಪಾಲಕ್ಕೆ ಬಂದಿದ್ದರು. ಮಣಿಪಾಲದಲ್ಲಿ ಈ ಹಿಂದೆ ವಿದ್ಯಾಭ್ಯಾಸ ಮಾಡಿದ್ದ ದೀಪಯನ್ ತನ್ನ ಸ್ನೇಹಿತೆ ಎಂದು ಹೇಳಿಕೊಂಡಿರುವ ಸಿಮ್ರಾನ್ರನ್ನು ಕಾಲೇಜು ತೋರಿಸುವ ಸಲುವಾಗಿ ಮಣಿಪಾಲಕ್ಕೆ ಕರೆತಂದಿದ್ದರೆನ್ನಲಾಗಿದೆ.
ಕೆಲ ದಿನ ಮಣಿಪಾಲದ ಆಸುಪಾಸಿನಲ್ಲಿ ಇವರಿಬ್ಬರು ಸುತ್ತಾಡಿದ್ದು, ನಿನ್ನೆ ಬೆಳಗ್ಗೆ ಬೆಂಗಳೂರು ಮೂಲಕ ಚೆನ್ನೈಗೆ ಸಿಮ್ರಾನ್ ಹೊರಟಿದ್ದರೆ, ದೀಪಯನ್ ಮುಂಬೈ ಮೂಲಕ ವಡೋದರಕ್ಕೆ ತೆರಳಲು ಮಂಗಳೂರು ಏರ್ಪೋರ್ಟ್ಗೆ ಆಗಮಿಸಿದ್ದರು.
ದೀಪಯನ್ ಹತ್ತಿದ್ದ ವಿಮಾನ ಇನ್ನೇನು ಟೇಕ್ ಆಫ್ಗೆ ರೆಡಿ ಆಗಿದ್ದಾಗ, ಬೋರ್ಡಿಂಗ್ನಲ್ಲಿದ್ದ ಸಿಮ್ರಾನ್ ಮೆಸೇಜ್ ಕಳುಹಿಸಿದ್ದು, "ಇಷ್ಟೊಂದು ಜನ ಮುಸ್ಲಿಮರ ಜೊತೆ ಹೋಗುತ್ತಿದ್ದೀಯ, ನೀನು ಬಾಂಬರಾ" ಅಂತಾ ಮೆಸೇಜ್ ನಲ್ಲಿ ಕೇಳಿದ್ದಳು.
ಸಿಮ್ರಾನ್ ಮೆಸೇಜ್ ನೋಡಿದ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಗಾಬರಿಗೊಂಡು ಏರ್ಪೋರ್ಟ್ ಅಥಾರಿಟಿಗೆ ಅಲರಾಮ್ ನೀಡಿದ್ದರು. ತಕ್ಷಣ ಮುಂಬೈಗೆ ಹೊರಟಿದ್ದ ವಿಮಾನವನ್ನು ಐಸೋಲೇಷನ್ ಮಾಡಲಾಗಿತ್ತು. ಎಲ್ಲಾ ಪ್ರಯಾಣಿಕರನ್ನು ಇಳಿಸಿ ತಪಾಸಣೆ ಮಾಡಿ, ಬಳಿಕ ಮೂರು ಗಂಟೆ ತಡವಾಗಿ ವಿಮಾನ ಹೊರಟಿತ್ತು.
ಈ ಬಗ್ಗೆ ಇಂಡಿಯೋ ವಿಮಾನ ಸಂಸ್ಥೆಯ ಮ್ಯಾನೇಜರ್ ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಲ್ಲಿ ಸಂದೇಶದಲ್ಲಿ ರವಾನೆಯಾಗಿರುವ ಅಂಶವನ್ನು ಉಲ್ಲೇಖಿಸಲಾಗಿದೆ. ಅದರಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಯುವಕ ಹಾಗೂ ಯುವತಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
‘‘ಯುವಕ ಯುವತಿಯರಿಬ್ಬರ WhatsApp ಸಂಭಾಷಣೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲ ಹೊತ್ತು ಗೊಂದಲ ಸೃಷ್ಟಿಯಾಗಿತ್ತು. ಮುಂಬೈಗೆ ಹೊರಟಿದ್ದ ವಿಮಾನ ಯಾನವನ್ನು ಕೆಲ ಗಂಟೆಗಳ ಕಾಲ ತಡೆಹಿಡಿದ ಕಾರಣ ಸಾಕಷ್ಟು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಮಾತ್ರವಲ್ಲದೆ ಅವರಿಬ್ಬರು ತಮ್ಮ WhatsApp ಸಂಭಾಷಣೆಯ ವೇಳೆ ಸಮುದಾಯವೊಂದರ ಬಗ್ಗೆ ತಪ್ಪು ಅಭಿಪ್ರಾಯವನ್ನು ಬಿಂಬಿಸಿರುವುದು ವ್ಯಕ್ತವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.’’
ಎನ್. ಶಶಿಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತರು.