ರಾಮಕೃಷ್ಣ ಮಠದಲ್ಲಿ ಸ್ವಾತಂತ್ರ್ಯದಿನಾಚರಣೆ
ಮಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣವನ್ನು ರಾಮಕೃಷ್ಣ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರೇಮಾನಂದ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. "ಸ್ವಾತಂತ್ರ್ಯ ಹಾಗೂ ಸ್ವಚ್ಛತೆ ಮಹಾತ್ಮಾ ಗಾಂಧೀಜಿಯವರ ಕಂಡ ಪ್ರಮುಖ ಕನಸುಗಳು. ಸ್ವಾತಂತ್ರ್ಯ ಬಂದು ಎಪ್ಪತ್ತೈದು ಸಂವತ್ಸರಗಳು ಸಂದಿರುವ ಈ ಶುಭ ಸಂದರ್ಭದಲ್ಲಿ ಸ್ವಚ್ಛತೆಯನ್ನೂ ನನಸು ಮಾಡಲು ರಾಮಕೃಷ್ಣ ಮಠ ಅಹರ್ನಿಸಿಯಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಿದಾಗ ಈ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಅರ್ಥಪೂರ್ಣವೆನಿಸುತ್ತದೆ" ಎಂದು ತಿಳಿಸಿ ಸ್ವಾತಂತ್ರೋತ್ಸವದ ಶುಭಕಾಮನೆಗಳನ್ನು ತಿಳಿಸಿದರು.
ಭಾರತೀಯ ಸೈನ್ಯದ ಮಾಜಿ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ "ಸ್ವಾತಂತ್ರ್ಯದ ತರುವಾಯ ಭಾರತ ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ, ರಕ್ಷಣೆ, ಆಹಾರ ಉತ್ಪಾದನೆ ಹೀಗೆ ಅನೇಕ ಸಾಧನೆಗಳನ್ನು ಮಾಡಿರುವುದು ಎಲ್ಲರಿಗೂ ಹೆಮ್ಮೆ ತರುವ ವಿಚಾರ. ಎಪ್ಪತ್ತೈದು ವರ್ಷಗಳ ಈ ಸ್ವಾತಂತ್ರೋತ್ಸದ ದಿನದಂದು ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಸಾಗಬೇಕಾದ ಹಾದಿಯ ಬಗ್ಗೆ ಯೋಚಿಸಬೇಕಿದೆ. ಸಣ್ಣತನ, ಅಸೂಹೆ, ದ್ವೇಷ, ಹಿಂಸೆ ಇಂತಹ ಕ್ಷುಲ್ಲಕ ವಿಚಾರಗಳನ್ನು ಬಿಟ್ಟು ಉನ್ನತ ವಿಚಾರದತ್ತ ಸಾಗುವಂತೆ ಕರೆ ನೀಡಿದರು.
ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ ನೀಡಿ"ಪ್ರತಿಯೋರ್ವ ಭಾರತೀಯ ತಮ್ಮ ಕರ್ತವ್ಯ ಹಾಗೂ ಜಾವಾಬ್ದಾರಿಗಳನ್ನು ಅರಿತು ಮುನ್ನಡೆದರೆ ನಮ್ಮ ಹಿರಿಯರು ಗಳಿಸಿಕೊಟ್ಟ ಈ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದರು.
ಇದಕ್ಕೂ ಮುನ್ನ ಶ್ರೀರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳು ಸ್ವಾಮಿ ಅಭಿರಾಮಾನಂದಜಿ ಜೊತೆಗೂಡಿ ದೇಶಭಕ್ತಿಗೀತೆಗಳನ್ನು ಹಾಡಿದರು.
ಬಾಲಕಾಶ್ರಮದ ಹಳೆ ವಿದ್ಯಾರ್ಥಿಗಳು, ಶ್ರೀ ಶಾರದಾ ಮಹಿಳಾವೃಂದದರು, ಸ್ವಚ್ಛ ಮಂಗಳೂರು ಸ್ವಯಂಸೇವಕರು ಸ್ವಾತಂತ್ರೋತ್ಸವದಲ್ಲಿ ಭಾಗಿಯಾದರು.
ಶ್ರೀ ರಂಜನ್ ಬೆಳ್ಳರಪಾಡಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸ್ವಾಮಿ ಏಕಗಮ್ಯಾನಂದಜಿ ವಂದಿಸಿದರು.