ಮಂಗಳೂರು ವಿವಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕೊಣಾಜೆ: ನಾವೆಲ್ಲರೂ ಭಾರತೀಯರು ಎಂಬ ರಾಷ್ಟ್ರೀಯ ಪ್ರಜ್ಞೆ ಸದಾ ಜಾಗೃತರಾಗಿರಬೇಕು. ಸಾವಿರಾರು ಜನರ ತ್ಯಾಗ ಬಲಿದಾನದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಪ್ರಾಮಾಣಿಕತೆಯೊಂದಿಗೆ ನಮ್ಮ ದೇಶ, ತಾಯಿನೆಲದ ರಕ್ಷಣೆಗೆ ಎಲ್ಲರೂ ಬದ್ಧರಾಗಿರೋಣ ಎಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರು ಹೇಳಿದರು.
ಅವರು ಸೋಮವಾರ ಮಂಗಳೂರು ವಿವಿಯಲ್ಲಿ ನಡೆದ 76ನೇ ಸ್ವಾತಂತ್ರೋತ್ಸವ ಸಂಭ್ರಮದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಾವು ಇಂದು ನೆಮ್ಮದಿಯಿಂದ ಜೀವನ ನಡೆಸುವುದಿದ್ದರೆ ನಮ್ಮ ಸೈನಿಕರೂ ಕಾರಣರಾಗಿದ್ದಾರೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯಂತೆ ಸೈನಿಕರು ಮತ್ತು ರೈತರು ನಮ್ಮ ಶಕ್ತಿಯಾಗಿದ್ದಾರೆ. ದೇಶ ಪ್ರೇಮದೊಂದಿಗೆ ಮಾನವೀಯ ಮೌಲ್ಯಗಳು ಬೆಳೆಯಲಿ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ತ್ಯಾಗ ಬಲಿದಾನದ ಪ್ರತೀಕವಾಗಿದೆ. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ , ಹಣಕಾಸು ಅಧಿಕಾರಿ ಪ್ರೊ.ಕೆ.ಎಸ್.ಜಯಪ್ಪ ಅವರು ಉಪಸ್ಥಿತರಿದ್ದರು. ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ.ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ಅವರು ವಂದಿಸಿದರು.
ಡಾ.ಧನಂಜಯ ಕುಂಬ್ಳೆ ಹಾಗೂ ಡಾ.ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಧ್ವಜಾರೋಹಣಕ್ಕಿಂತ ಮುಂಚೆ ವಿಶ್ವವಿದ್ಯಾನಿಲಯದ ಸಿ.ಎನ್.ರಾವ್ ಸರ್ಕಲ್ ನಿಂದ ಮಂಗಳಾ ಸಭಾಂಗಣದ ಮುಂಭಾಗದ ಹುತಾತ್ಮರ ಚೌಕಿಯವರಗೆ ಮೆರವಣಿಗೆ ನಡೆಯಿತು.