ಉಳ್ಳಾಲ: ಪ್ರತಿಭಾ ಕಾರಂಜಿ ಕಾರ್ಯಕ್ರಮ
ಉಳ್ಳಾಲ: ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರಲು ಇರುವ ಒಂದು ವೇದಿಕೆ. ವಿದ್ಯಾರ್ಥಿಗಳಿಗೆ ಇದರಲ್ಲಿ ಪಾಲ್ಗೊಂಡು ಪ್ರತಿಭೆ ಹಂಚಲು ಅವಕಾಶ ಇದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಇದಕ್ಕೆ ಶಿಕ್ಷಕರ, ಪೋಷಕರ ಸಹಕಾರ ಬಹಳಷ್ಟು ಇದೆ. ಬಹುಮಾನಕ್ಕಿಂತ ಭಾಗವಹಿಸುವುದು, ಪ್ರತಿಭೆ ಬೆಳೆಸುವುದು, ಅದನ್ನು ಗುರುತಿಸುವುದು ಮುಖ್ಯ ಆಗಿರುತ್ತದೆ ಎಂದು ಶಾಸಕ ಯುಟಿ ಖಾದರ್ ಹೇಳಿದರು.
ಅವರು ದ. ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು, ದಕ್ಷಿಣ ವಲಯ ಸಮೂಹ ಸಂಪನ್ಮೂಲ ಕೇಂದ್ರ ಪೆರ್ಮನ್ನೂರು ಹಾಗೂ ಹಿರಾ ಆಂಗ್ಲ ಮಾಧ್ಯಮ ಶಾಲೆ ಬಬ್ಬುಕಟ್ಟೆ ಇವುಗಳ ಸಹಯೋಗದಲ್ಲಿ ಹಿರಾ ಪ್ರಾಥಮಿಕ ಶಾಲೆ ವಠಾರದಲ್ಲಿ ಬುಧವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಂತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ.ಎಚ್. ಮೆಹಮೂದ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ದಲ್ಲಿ ಕೌನ್ಸಿಲರ್ ಮುಸ್ತಾಕ್ ಪಟ್ಲ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಷ್ಮಾ ಉಪನ್ಯಾಸಕ ಮನೀಷ್, ಸುವಾಸಿನಿ ,ಸಮಾಜ ಸೇವಕ ಸಿ.ಎಚ್.ಸಲಾಂ , ಬಾಜಿಲ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.
ಪೆರ್ಮನ್ನೂರು ಕ್ಲಸ್ಟರ್ ಸಿಆರ್ ಪಿ ಗೀತಾ ಸಲ್ದಾನ ಸ್ವಾಗತಿಸಿದರು.ಉಪನ್ಯಾಸಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಗುಲ್ಶನ್ ವಂದಿಸಿದರು.
ಪ್ರತಿಭಾ ಕಾರಂಜಿ ಪ್ರಯುಕ್ತ ಪೆರ್ಮನ್ನೂರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್,ಹಿಂದಿ, ಉರ್ದು, ಅರೆಬಿಕ್ ಭಾಷೆಗಳಲ್ಲಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.