ಸೇವಾ ಮನೋಭಾವನೆ ಎಲ್ಲರಲ್ಲೂ ಬೆಳೆಯುವಂತಾಗಲಿ: ಪ್ರಸಾದ್ ರೈ
ಕೊಣಾಜೆ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸುಮಾರು 220 ಮನೆಗಳಿಗೆ ಕೊಣಾಜೆ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ದೇವಣ್ಣ ಶೆಟ್ಟಿ ಅವರು ಉಚಿತವಾಗಿ ಅಕ್ಕಿ ವಿತರಿಸುವ ಕಾರ್ಯಕ್ರಮ ಬುಧವಾರ ನಡೆಯಿತು.
ಕೊಣಾಜೆ ಬೊಳ್ಮದ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ಹಿರಿಯ ಮುಖಂಡ ಪ್ರಸಾದ್ ರೈ ಕಲ್ಲಿಮಾರ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಣ್ಣ ಶೆಟ್ಟಿ ಅವರು ಪ್ರತೀ ಮನೆಗೂ ಜಾತಿ ಮತ ಪಕ್ಷ ಬೇಧವಿಲ್ಲದೆ ಅಕ್ಕಿಯನ್ನು ವಿತರಿಸುವಂತಹ ಪುಣ್ಯದ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇವರು ಉಚಿತ ಅಕ್ಕಿ ವಿತರಣೆಯ ಮೂಲಕ ಗುರುತಿಸಿರುವುದು ಮಾದರಿಯಾಗಿದೆ. ಇಂತಹ ಸಮಾಜಸೇವೆಯ ಗುಣವು ಎಲ್ಲರಲ್ಲೂ ಬೆಳೆಯುಂತಾದರೆ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಕಲ್ಲಿಮಾರ್, ರಾಜರಾಂ ರೈ ಕಲ್ಲಿಮಾರ್, ಹರೀಶ್ ದಾಸ್ ಮುಚ್ಚಿಲಕೋಡಿ, ಗುಲಾಬಿ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.