ಉಳ್ಳಾಲ ನಗರ ಸಭೆ ಆಡಳಿತ ವಿರುದ್ಧ ಆರೋಪ; ತನಿಖೆ ಬಳಿಕ ಕ್ರಮ: ಅಧ್ಯಕ್ಷೆ ಚಿತ್ರಕಲಾ
ಉಳ್ಳಾಲ; ನಗರ ಸಭೆಯ ಆಡಳಿತದ ವಿರುದ್ಧ ಆರೋಪ ಪ್ರತ್ಯಾರೋಪ ಬಂದಿದ್ದು, ಬಂದಿರುವ ಆರೋಪಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಸಂಬಂಧಪಟ್ಟ ತನಿಖಾಧಿಕಾರಿಗಳ ಮೂಲಕ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಳ್ಳಾಲ ನಗರ ಸಭೆ ಅಧ್ಯಕ್ಷರಾದ ಚಿತ್ರ ಕಲಾ ಹೇಳಿದರು.
ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟುವಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಮಾತನಾಡಿ, ನಗರ ಸಭೆ ಅಭಿವೃದ್ಧಿಗೆ ಒತ್ತು ನೀಡಿದೆ. ಚರಂಡಿ , ರಸ್ತೆ, ನೀರು ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡುವುದು ನಮ್ಮ ಗುರಿ. ಈ ನಡುವೆ ನಮ್ಮ ಆಡಳಿತದ ವಿರುದ್ಧ ಆರೋಪಗಳು ಬಂದಿವೆ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆರೋಪಗಳು ಬರುವುದು ಸಹಜವಾದರೂ ಕೂಡಾ ಬಂದ ಆರೋಪಗಳನ್ನು ಸಕಾರಾತ್ಮಕ ಆಗಿ ಸ್ವೀಕರಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಇದೇ ವಿಚಾರಕ್ಕೆ ಸಂಬಂಧಿಸಿ ಎರಡ್ಮೂರು ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಅಕ್ರಮ ಡೋರ್ ನಂಬರ್, ಉದ್ದಿಮೆ ಪರವಾನಿಗೆ, ಸಹಿತ ಕೆಲವು ಆರೋಪಗಳನ್ನು ವಿರೋಧ ಪಕ್ಷದ ಸದಸ್ಯರು ನಮ್ಮ ಮೇಲೆ ಹೊರಿಸಿದ್ದಾರೆ. ಜವಾಬ್ದಾರಿ ನಮಗೂ ಇದೆ. ಭ್ರಷ್ಟಾಚಾರಕ್ಕೆ ನಾವು ಅವಕಾಶ ನೀಡಿಲ್ಲ. ಅಕ್ರಮ ಡೋರ್ ನಂಬರ್, ಉದ್ದಿಮೆ ಪರವಾನಿಗೆ ಕೊಡುವುದು ನಾವಲ್ಲ. ಇದರ ಜವಾಬ್ದಾರಿ ಇರುವುದು ಅಧಿಕಾರಿಗಳಿಗೆ. ನಾವು ಸೂಚನೆ ಕೊಡುವುದು ಮಾತ್ರ. ಇದರಲ್ಲಿ ಏನಾದರು ಅಕ್ರಮ ನಡೆದಿದೆ ಎಂದು ತನಿಖೆ ಯಲ್ಲಿ ಸಾಬೀತು ಗೊಂಡಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ತನಿಖೆ ನಡೆಸಲು ಸಮಿತಿ ಕೂಡಾ ರಚನೆ ಆಗಿದೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಮಾತನಾಡಿ, ವಿರೋಧ ಪಕ್ಷದ ವರು ಆರೋಪ ಮಾಡುವುದು ಸಹಜ. ಅದನ್ನು ಎದುರಿಸುವ ಜವಾಬ್ದಾರಿ ಆಡಳಿತ ರೂಡಾ ಪಕ್ಷದ್ದು. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕೆ ಭಯ ಪಡುವ ಅಗತ್ಯವಿಲ್ಲ. ಅಗತ್ಯ ಸೇವೆ ಗಳು ಜನರಿಗೆ ಸಿಕ್ಕಿರುವುದು ಕಾಂಗ್ರೆಸ್ ನಿಂದಲೇ. ಕಾಂಗ್ರೆಸ್ ಅಧಿಕಾರದಲ್ಲಿ ಪಕ್ಷ ಭೇದ ತಾರತಮ್ಯ ಮಾಡುವುದಿಲ್ಲ. ಉಳ್ಳಾಲ ನಗರ ಸಭೆ ಅಧ್ಯಕ್ಷ ಸ್ಥಾನ ಈ ಬಾರಿ ಮಹಿಳೆಗೆ ಸಿಕ್ಕಿದೆ. ಮಹಿಳೆಯರಿಗೆ ಗೌರವ ಕೊಡಲು ವಿರೋಧ ಪಕ್ಷದ ವರಿಗೆ ಗೊತ್ತಿಲ್ಲ. ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಮುಖ ಕೇಂದ್ರ ಉಳ್ಳಾಲ. ಪಕ್ಷದ ಸದಸ್ಯರು ಪಕ್ಷದ ವಿರುದ್ಧ ವಾಗಿ ನಡಕೊಂಡರೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ. ನಗರ ಸಭೆ ಯ ಕಾಂಗ್ರೆಸ್ ಕೌನ್ಸಿಲರ್ ರವಿ ಚಂದ್ರ ಅರೆ ನಗ್ನ ವಾಗಿ ನಗರ ಸಭೆ ವಿರುದ್ಧ ಹೋರಾಟ ಮಾಡಿದ ರೀತಿಯಲ್ಲಿ ವರ್ತಿಸಿದ್ದು ಶೋಭೆ ತರುವುದಿಲ್ಲ.ಈ ಬಗ್ಗೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಆಡಳಿತಾ ರೂಡಾ ಪಕ್ಷದ ಸದಸ್ಯರಲ್ಲಿ ಭಿನ್ನಾಬಿಪ್ರಾಯ ಇರುವುದು ಸಹಜ. ಪಕ್ಷ ವಿರೋಧ ಚಟುವಟಿಕೆ ಗಳಲ್ಲಿ ತೊಡಗಿದರೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಶಿಸ್ತು ಪಕ್ಷ ಕಾಪಾಡುತ್ತದೆ. ಅದು ಪಕ್ಷದ ಜವಾಬ್ದಾರಿ ಎಂದರು.
ಸುದ್ದಿ ಗೋಷ್ಠಿಯಲ್ಲಿ ನಗರ ಸಭೆ ಸದಸ್ಯರಾದ ಭಾರತಿ, ಅಶ್ರಫ್ ಮುಕಚೇರಿ, ಇಸ್ಮಾಯಿಲ್, ಬಾಜಿಲ್ ಡಿ ಸೋಜ, ಸಪ್ನಾ ಹರೀಶ್, ವೀಣಾ , ಶಶಿಕಲಾ, ಕಾಂಗ್ರೆಸ್ ಉಳ್ಳಾಲ ನಗರಾಧ್ಯಕ್ಷ ಮುಸ್ತಫಾ ಉಳ್ಳಾಲ ಉಪಸ್ಥಿತರಿದ್ದರು.