ಕಮ್ಯುನಿಸ್ಟ್ ಹೆಜ್ಜೆಗಳು ಈಗಲೂ ದೇಶದಲ್ಲಿ ಹಸಿರಾಗಿವೆ: ಮಹಾಂತೇಶ್
ಕಮ್ಯುನಿಸ್ಟ್ ಚಳವಳಿಯ ಆರಂಭಿಕ ಹೆಜ್ಜೆಗಳು-ಕೃತಿ ಬಿಡುಗಡೆ
ಮಂಗಳೂರು, ಸೆ.25: ವಿಮೋಚನಾ ಚಳವಳಿಯಿಂದ ಆರಂಭವಾದ ಕಮ್ಯುನಿಸ್ಟ್ರರ ಕ್ರಾಂತಿಕಾರಿ ಹೆಜ್ಜೆಗಳು ಈಗಲೂ ದೇಶದೆಲ್ಲೆಡೆ ಜೀವಂತವಾಗಿವೆ. ಶೋಷಿತ ಜನಚಳವಳಿಯ ಜತೆ ಕಮ್ಯುನಿಸ್ಟರು ಅವಿನಾಭಾವ ಸಂಬಂಧ ಹೊಂದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಸಿಐಟಿಯು ಸಂದೇಶ ಮಾಸ ಪತ್ರಿಕೆಯ ಸಂಪಾದಕ ಕೆ.ಮಹಾಂತೇಶ್ ಅಭಿಪ್ರಾಯಪಟ್ಟರು.
ಚಿಂತಕ ಡಾ.ಕೃಷ್ಣಪ್ಪಕೊಂಚಾಡಿ ಅನುವಾದಿತ ಮುಝಫರ್ ಅಹ್ಮದ್ ಅವರ ‘ಕಮ್ಯುನಿಸ್ಟ್ ಚಳವಳಿಯ ಆರಂಭಿಕ ಹೆಜ್ಜೆಗಳು’ ಎಂಬ ಕೃತಿಯನ್ನು ನಗರದ ಸಹೋದಯ ಸಭಾಂಗಣದಲ್ಲಿ ರವಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತೀಯ ಸ್ವಾತಂತ್ರ್ಯ ಚಳವಳಿಯು ಕಮ್ಯುನಿಸ್ಟ್ ಪಕ್ಷದ ಸ್ಥಾಪನೆ ಬಳಿಕವಷ್ಟೇ ಒಂದು ಕ್ರಾಂತಿಕಾರಿ ಪಥದತ್ತ ಸಾಗಲು ಸಾಧ್ಯವಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಬೇಡಿಕೆಯನ್ನು ಮೊದಲು ಕಮ್ಯುನಿಸ್ಟರೇ ಮಂಡಿಸಿದ್ದನ್ನು ಕೆ. ಮಹಾಂತೇಶ್ ನೆನಪಿಸಿದರು.
ಪುಸ್ತಕ ಪರಿಚಯಿಸಿದ ನಿವೃತ್ತ ಪ್ರಾಧ್ಯಾಪಕ ಡಾ.ರಾಜೇಂದ್ರ ಉಡುಪ ‘ಕಮ್ಯುನಿಸ್ಟ್ ಪಕ್ಷದ ಹುಟ್ಟೇ ಒಂದು ಸಾಹಸಮಯವಾಗಿದೆ. 1920ರ ಕಾಲಘಟ್ಟದಲ್ಲಿ ಜನ್ಮ ತಾಳಿದ ಭಾರತದ ಕಮ್ಯುನಿಸ್ಟ್ ಪಕ್ಷವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಬ್ರಿಟಿಷರು ಹೆಣೆದ ತಂತ್ರಗಳು ಅಗಾಧವಾದದ್ದು. ಅವುಗಳನ್ನೆಲ್ಲ ಮೆಟ್ಟಿ ನಿಂತು, ಅನುಭವಿಸಿದ ಯಾತನಾಮಯ ಬದುಕಿನ ಎಳೆಎಳೆಯನ್ನು ಮುಝಫರ್ ಅಹ್ಮದ್ರವರು ಬಿಚ್ಚಿಟ್ಟ ರೀತಿ ರೋಮಾಂಚನಕಾರಿ ಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಗತಿಪರ ಜನಸಮುದಾಯ ಪ್ರಕಾಶನದ ಪ್ರಕಾಶಕ ಸುನಿಲ್ ಕುಮಾರ್ ಬಜಾಲ್ ‘ಮಾಧ್ಯಮದಲ್ಲಿ ತನ್ನ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸಲು ಜನ್ಮ ತಾಳಿದ ಪ್ರಗತಿಪರ ಜನಸಮುದಾಯ ಮಾಸಿಕ ಪತ್ರಿಕೆಯು ಅತ್ಯಲ್ಪಕಾಲದಲ್ಲಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಕಾರ್ಯನಿರ್ವಹಿಸಿದೆ. ಬಳಿಕ ಹಲವಾರು ಪುಸ್ತಕಗಳನ್ನು ಮುದ್ರಿಸಿ ಜನತೆಯ ತಿಳುವಳಿಕೆಯ ಮಟ್ಟವನ್ನು ಸುಧಾರಿಸಲು ಪ್ರಯತ್ನಪಟ್ಟಿದೆ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಪ್ರಾಂಶುಪಾಲ ಡಾ.ಎನ್. ಇಸ್ಮಾಯಿಲ್ ಮಾತನಾಡಿದರು. ವೇದಿಕೆಯಲ್ಲಿ ವಿಚಾರವಾದಿ ಸಂಘಟನೆಯ ಡಾ.ನರೇಂದ್ರ ನಾಯಕ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಕೃತಿಯ ಮುಖಪುಟ ವಿನ್ಯಾಸಗಾರ ನಾಗೇಶ್ ಕಲ್ಲೂರು, ಪುಸ್ತಕ ಅನುವಾದಕ ಡಾ.ಕೃಷ್ಣಪ್ಪಕೊಂಚಾಡಿ ಉಪಸ್ಥಿತರಿದ್ದರು.
ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಬಿ.ಕೆ. ಇಮ್ತಿಯಾಝ್ ವಂದಿಸಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.