ಮಂಗಳೂರು: ಅಂಗಡಿಗೆ ನುಗ್ಗಿ ಕಳ್ಳತನ
ಸಾಂದರ್ಭಿಕ ಚಿತ್ರ
ಮಂಗಳೂರು, ಸೆ.27: ನಗರದ ಮೈದಾನ 4ನೇ ಅಡ್ಡ ರಸ್ತೆಯ ಎರಡು ಅಂಗಡಿಗಳಲ್ಲಿ ಸೋಮವಾರ ರಾತ್ರಿ ಕಳ್ಳತನವಾಗಿರುವ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ರಸ್ತೆಯ ಪೂಟ್ವೇರ್ನ ಹೋಲ್ ಸೇಲ್ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಶ್ರವಣ್ ಸಿಂಗ್ ಮತ್ತು ಜಿನಸಿ ಅಂಗಡಿಯ ಮಾಲಕ ಜೋರಾ ರಾಮ್ರಿಗೆ ಸೇರಿದ ಮಹಾರಾಜ ಮಾರ್ಕೆಟಿಂಗ್ ಅಂಗಡಿಯ ಶಟರ್ ಮುರಿದು ಹಣವನ್ನು ಕಳವುಗೈದ ಬಗ್ಗೆ ವರದಿಯಾಗಿದೆ.
ಫೂಟ್ವೇರ್ ವ್ಯಾಪಾರಿ ಶ್ರವಣ್ ಸಿಂಗ್ ಪ್ರತಿದಿನ ಬೆಳಗ್ಗೆ 8ಕ್ಕೆ ವ್ಯಾಪಾರ ಮಾಡಲು ನಗರದಕ್ಕೆ ಬಂದು ರಾತ್ರಿ 9ಕ್ಕೆ ಅಂಗಡಿಯನ್ನು ಮುಚ್ಚಿ ಹೋಗುತ್ತಿದ್ದು, ಆವಾಗ ವ್ಯಾಪಾರದ ಹಣವನ್ನು ಮನೆಗೆ ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಸೆ.26ರಂದು ಬ್ಯಾಂಕ್ಗೆ ಪಾವತಿಸುವ ಸಲುವಾಗಿ ಮನೆಯಿಂದ 75,000 ರೂ.ವನ್ನು ತಂದಿದ್ದು, ಆದರೆ ಬ್ಯಾಂಕ್ಗೆ ಹಣ ಕಟ್ಟಲಾಗದೆ ಸೆ.27ರಂದು ಬ್ಯಾಂಕ್ಗೆ ಪಾವತಿಸಲು ನಿರ್ಧರಿಸಿ ಹಣವನ್ನು ಅಂಗಡಿಯ ಮರದ ಟೇಬಲ್ನ ಡ್ರಾವರ್ನಲ್ಲಿಟ್ಟು ಲಾಕ್ ಮಾಡಿ ಸೋಮವಾರ ರಾತ್ರಿ 9ಕ್ಕೆ ಮನೆಗೆ ತೆರಳಿದ್ದರು. ಸೆ.27ರ ಬೆಳಗ್ಗೆ 8ಕ್ಕೆ ಅಂಗಡಿ ತೆರೆಯಲು ಬಂದಾಗ ಶಟರ್ ಬೀಗ ಮುರಿದಿರುವುದು ಕಂಡುಬಂದಿದೆ. ಅಲ್ಲದೆ ಡ್ರಾವರ್ನ ಲಾಕ್ ಮುರಿದು ಅದರೊಳಗೆ ಇರಿಸಿದ್ದ 75,000 ರೂ. ಕಳವಾಗಿರುವುದು ಬೆಳಕಿಗೆ ಬಂದಿದೆ.
ಪಕ್ಕದ ಅಂಗಡಿಯ ಮಾಲಕ ಜೋರಾ ರಾಮ್ರ ಮಹಾರಾಜ ಮಾರ್ಕೆಟಿಂಗ್ ಜಿನಸಿ ಸಾಮಾನಿನ ಅಂಗಡಿಯ ಶಟರ್ ಮುರಿದ ಕಳ್ಳರು ಡ್ರಾವರ್ನಲ್ಲಿದ್ದ 25,000 ರೂ. ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.