ಮಂಗಳೂರು ದಸರಾ ಮೆರವಣಿಗೆಯಲ್ಲಿ ಬುಲ್ಡೋಝರ್ ಜೊತೆ ಆದಿತ್ಯನಾಥ್ ಟ್ಯಾಬ್ಲೋ
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವ
ಮಂಗಳೂರು, ಅ. 6: ಆರೋಪಿಗಳ ಆಸ್ತಿಯನ್ನು ಬುಲ್ಡೋಝರ್ ಮೂಲಕ ಧ್ವಂಸಗೊಳಿಸುವ ʼಬುಲ್ಡೋಝರ್ ನ್ಯಾಯʼ ಖ್ಯಾತಿಯ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಟ್ಯಾಬ್ಲೋ ಮಂಗಳೂರಿನಲ್ಲಿ ನಡೆದ ದಸರಾ ರ್ಯಾಲಿ 2022ರಲ್ಲಿ ಕಾಣಿಸಿಕೊಂಡಿದೆ.
ಬುಲ್ಡೋಝರ್ನೊಂದಿಗೆ ಆದಿತ್ಯನಾಥ್ ವೇಷಭೂಷಣ ಧರಿಸಿದ ವ್ಯಕ್ತಿಯೋರ್ವ ಅಂಗರಕ್ಷಕರೊಂದಿಗೆ ನಿಂತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಆದಿತ್ಯನಾಥ್ ಟ್ಯಾಬ್ಲೋವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಬಜರಂಗದಳದ ನೇತೃತ್ವದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ವೀಡಿಯೊ ಮಂಗಳೂರಿನ ಬಜ್ಪೆ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಹಿಂದುತ್ವವಾದಿ ಗುಂಪುಗಳು ಇತ್ತೀಚಿಗೆ ರಾಜ್ಯದಲ್ಲಿ “ಆದಿತ್ಯನಾಥ್ ಮಾದರಿ” ಆಡಳಿತವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸುತ್ತಿರುವಂತೆಯೇ ಮಂಗಳೂರು ದಸರಾದಲ್ಲಿ ಆದಿತ್ಯನಾಥ್ ಟ್ಯಾಬ್ಲೋ ಕಾಣಿಸಿಕೊಂಡಿದೆ. ಮಂಗಳೂರು ದಸರಾವನ್ನು ರಾಜಕೀಯಗೊಳಿಸಲಾಗುತ್ತಿರುವ ಬಗ್ಗೆಯೂ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ.