ಟೋಲ್ಗೇಟ್ ಮುಚ್ಚುಗಡೆ ಹೆಸರಲ್ಲಿ ಜನತೆಗೆ ದ್ರೋಹ: ದ.ಕ.-ಉಡುಪಿ ಜಿಲ್ಲಾ ಸಿಪಿಐ ಆರೋಪ
ಮಂಗಳೂರು: ಸುರತ್ಕಲ್ ಟೋಲ್ಗೇಟ್ ಮುಚ್ಚುಗಡೆಯ ಹೆಸರಿನಲ್ಲಿ ಕೇಂದ್ರ ಸರಕಾರವು ಅವಿಭಜಿತ ದ.ಕ. ಜಿಲ್ಲೆಯ ಜನತೆಗೆ ದ್ರೋಹ ಎಸಗಿದೆ ಎಂದು ದ.ಕ.-ಉಡುಪಿ ಜಿಲ್ಲಾ ಸಿಪಿಐ ಆರೋಪಿಸಿದೆ.
ಟೋಲ್ಗೇಟ್ ತೆರವುಗೊಳಿಸಲು ನಡೆಯುತ್ತಿರುವ ಸತತ ಹೋರಾಟಗಳಿಗೆ ಮಣಿದ ಸರಕಾರ ಅದನ್ನು ಮುಚ್ಚುವು ದಾಗಿ ಹೇಳಿದಾಗ ದ.ಕ.ಹಾಗೂ ಉಡುಪಿ ಜನತೆ ಸಂತಸಪಟ್ಟಿದ್ದರು. ಆದರೆ ಈ ಪ್ರಕ್ರಿಯೆಯ ಹಿಂದಿರುವ ಮೋಸ ವನ್ನು ಅರಿಯಲು ಕೆಲವು ದಿನಗಳೆ ಬೇಕಾಯಿತು. ಇಂದು ಹೆದ್ದಾರಿ ಪ್ರಾಧಿಕಾರ ನೀಡಿದ ಹೇಳಿಕೆ ಈ ಮೋಸವನ್ನು ಸ್ಪಷ್ಟಪಡಿಸಿದೆ.
ಸುರತ್ಕಲ್ ಟೋಲ್ಗೇಟನ್ನು ಮುಚ್ಚಿ ಅಲ್ಲಿ ಸಂಗ್ರಹಿಸಲಾಗುತ್ತಿದ್ದ ಶುಲ್ಕವನ್ನು ಹೆಜಮಾಡಿ ಟೋಲ್ಗೇಟಲ್ಲಿ ಸಂಗ್ರಹಿಸುವುದರಿಂದ ಹೆದ್ದಾರಿಯಲ್ಲಿ ಚಲಿಸುವ ವಾಹನಗಳಿಗೆ ಯಾವುದೇ ರೀತಿಯ ಲಾಭವಾಗುವುದಿಲ್ಲ. ಬಿಜೆಪಿ ಸರಕಾರ ಜನರನ್ನು ಮರಳು ಮಾಡುತ್ತಾ ಬಂಡವಾಳಗಾರರಿಗೆ, ದೊಡ್ಡ ವ್ಯಾಪಾರಿಗಳಿಗೆ ಹಾಗೂ ಲೂಟಿ ಕೋರರಿಗೆ ಸಹಾಯಹಸ್ತ ಚಾಚುವ ಪ್ರಕ್ರಿಯಗಳಿಗೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ. ಇನ್ನಾದರೂ ಜನತೆ ಎಚ್ಚೆತ್ತು ತಮ್ಮ ಹಕ್ಕುಗಳಿಗೆ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.