ಜಿಡಿಪಿಯಲ್ಲಿ ಮಂಗಳೂರಿಗೆ ಎರಡನೇ ಸ್ಥಾನ: ಸಂಸದ ನಳಿನ್ ಕುಮಾರ್ ಕಟೀಲ್
ದ.ಕ.ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆ
ಮಂಗಳೂರು: ಆರ್ಥಿಕ ಪ್ರಗತಿಯ ಅಳತೆಗೋಲಾದ ದೇಶಿಯ ಉತ್ಪಾದನೆ(ಜಿಡಿಪಿ)ಯಲ್ಲಿ ರಾಜ್ಯದಲ್ಲೇ ಮಂಗಳೂರು ಎರಡನೇ ಸ್ಥಾನದಲ್ಲಿದೆ ಎಂದು ಸಂಸದ ನಳಿನ್ ಕುಮಾರ್ಕಟೀಲ್ ಹೇಳಿದರು.
ನಗರದ ಕೊಟ್ಟಾರದಲ್ಲಿರುವ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ 3ನೇ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವ ಹುಬ್ಬಳ್ಳಿ ಅಥವಾ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಮೈಸೂರಿಗಿಂತಲೂ ಜಿಡಿಪಿಯಲ್ಲಿ ಮಂಗಳೂರು ಎರಡನೇ ಸ್ಥಾನದಲ್ಲಿರುವುದಕ್ಕೆ ನಾಗರಿಕರು, ಉದ್ದಿಮೆದಾರರು, ಬ್ಯಾಂಕರುಗಳು, ಕಾರಣರಾಗಿದ್ದಾರೆ ಎಂದರು.
ಬ್ಯಾಂಕುಗಳ ಮೂಲಕ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿಗದಿತ ಗುರಿ ತಲುಪದ ಬ್ಯಾಂಕುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಆ ಬ್ಯಾಂಕುಗಳಲ್ಲಿ ಸರಕಾರದ ಹಣವಿದ್ದಲ್ಲಿ ಕೂಡಲೇ ಅದನ್ನು ಹಿಂದಕ್ಕೆ ಪಡೆದು ಇತರೆ ಬ್ಯಾಂಕುಗಳಲ್ಲಿ ಠೇವಣಿ ಇರಿಸುವಂತೆ ಸಂಸದ ನಳಿನ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಾತನಾಡಿ, ತಲಾ ಆದಾಯದಲ್ಲೂ ಮಂಗಳೂರು ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಕೈಗಾರಿಕೆಗಳು, ಉದ್ದಿಮೆಗಳು, ವಾಣಿಜ್ಯ ಚಟುವಟಿಕೆಗಳ ಸಹಿತ ವಿವಿಧ ಕಾರಣಗಳಿಂದ ಇದು ಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿ ದ.ಕ.ಜಿಪಂ ಸಿಇಒ ಡಾ.ಕುಮಾರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಜಿಎಂ ಪಿ.ಬಿಸ್ವಾಸ್, ನಬಾರ್ಡ್ ಡಿಡಿಎಂ ಸಂಗೀತಾ ಎಸ್. ಕರ್ತ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ. ಉಪಸ್ಥಿತರಿದ್ದರು.
►ದ.ಕ.ಜಿಲ್ಲಾ ಲೀಡ್ ಬ್ಯಾಂಕ್ ಸಿದ್ಧಪಡಿಸಲಾಗದ ಸರಕಾರಿ ಸೌಲಭ್ಯಗಳ ಮಾಹಿತಿಯುಳ್ಳ ಗ್ಲಿಂಪ್ಸ್ ಆಫ್ ಗವಮೆಂಂಟ್ ಸ್ಪಾನ್ಸರ್ಡ್ ಸ್ಕಿಮ್ಸ್ ಎಂಬ ಹೊತ್ತಿಗೆಯನ್ನು ಸಂಸದರು ಬಿಡುಗಡೆಗೊಳಿಸಿದರು.
►ನಬಾರ್ಡ್ನ 2023-24ನೇ ಸಾಲಿನ ಪೊಟೇಶಿಯಲ್ ಲಿಂಕ್ಡ್ ಕ್ರೆಡಿಟ್ ಪ್ಲಾನ್ (ಪಿಎಲ್ಪಿ) ಪುಸ್ತಕವನ್ನು ಅನಾವರಣಗೊಳಿಸಲಾಯಿತು.
►ಪಿಎಂಇಜಿಪಿ (ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ)ಯ ಅನುಷ್ಠಾನದಲ್ಲಿ 2021-22ನೇ ಸಾಲಿನಲ್ಲಿ ಜಿಲ್ಲೆಯು ರಾಜ್ಯದಲ್ಲೇ ತೃತೀಯ ಸ್ಥಾನ ಪಡೆದಿದೆ. ಆ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸಾಲ ನೀಡಿದ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಹಾಗೂ ಸ್ಟೇಟ್ಬ್ಯಾಂಕ್ ಆಫ್ಇಂಡಿಯಾದ ಪ್ರಮುಖರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.