ಮಂಗಳೂರು: ಕ್ಷಯ ರೋಗ ನಿಯಂತ್ರಣ ದಿನಾಚರಣೆ
ಮಂಗಳೂರು, ಮಾ.24: ದ.ಕ. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯ ಕಚೇರಿ ಸಹಯೋಗದಲ್ಲಿ ಶುಕ್ರವಾರ ನಗರದ ಕುಂಟಿಕಾನದ ಎ. ಜೆ. ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಕ್ಷಯ ರೋಗ ನಿಯಂತ್ರಣ ದಿನ ಆಚರಿಸಲಾಯಿತು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಎಂ.ಎನ್ ಮಾತನಾಡಿ 1882ರ ಮಾ.24ರಂದು ಜರ್ಮನಿಯ ವಿಜ್ಞಾನಿ ರಾಬರ್ಟ್ ಕಾಕ್ ಕ್ಷಯರೋಗಕ್ಕೆ ಕಾರಣವಾಗುವ ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ರೋಗಾಣುವನ್ನು ಪತ್ತೆ ಮಾಡಿದ ನೆನಪಿಗಾಗಿ ಹಾಗೂ ಜನಸಮುದಾಯಕ್ಕೆ ರೋಗದ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಈ ರೋಗಕ್ಕೆ ಸುಮಾರು 6000 ವರ್ಷಗಳ ಇತಿಹಾಸವಿದೆ. ಕ್ಷಯ ರೋಗ ಲಕ್ಷಣಗಳಿರುವ ರೋಗಿಗಳು ಉಚಿತ ತಪಾಸಣೆ ನಡೆಸಿ, ರೋಗ ಖಚಿತವಾದ ನಂತರ 6 ತಿಂಗಳಿನಿಂದ 20 ತಿಂಗಳವರೆಗೆ ಉಚಿತ ಮತ್ತು ಕ್ರಮಬದ್ಧ ಚಿಕಿತ್ಸೆಯಿಂದ ಗುಣಮುಖರಾಗಲು ಸಾಧ್ಯವಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಶಾಂತ್ ಮಾರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಪ್ರಶಾಂತ್ ಶೆಟ್ಟಿ, ಡಾ.ಅಶೋಕ್ ಹೆಗ್ಡೆ, ಡಾ. ಸದಾಶಿವ ಶಾನುಭೋಗ್, ಡಾ. ಸಂಜೀವ್ ಬಡಿಗೇರ್ ಉಪಸ್ಥಿತರಿದ್ದರು. ಡಾ. ಭಜಂಗ ಶೆಟ್ಟಿ ಸ್ವಾಗತಿಸಿದರು.