ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿಸುವುದೇ ಎನ್ಇಪಿ ಗುರಿ: ಪ್ರೊ. ಪಿ ಎಸ್. ಯಡಪಡಿತ್ತಾಯ
ವಿವಿ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಪದ್ಧತಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ- 2020ಯ ಅನುಷ್ಠಾನದಲ್ಲಿ ಸವಾಲುಗಳಿವೆ. ಅವುಗಳನ್ನು ಮೆಟ್ಟಿ ನಿಂತು ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿಸುವುದೇ ಎಲ್ಲರ ಗುರಿಯಾಗಿದೆ. ದೇಶ ಮೊದಲು, ನಂತರ ವ್ಯಕ್ತಿತ್ವ ಮತ್ತು ಶಿಕ್ಷಕ ಎಂಬ ಚಿಂತನೆ ಎಲ್ಲಾ ವಿದ್ಯಾರ್ಥಿ ಗಳಲ್ಲಿರಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ ನಡೆದ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗವು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜುಗಳ ಸಹಯೋಗದಲ್ಲಿ ‘ರಾಷ್ಟ್ರೀಯ ಶಿಕ್ಷಣ ಪದ್ಧತಿ 2020 ರ ಅನುಷ್ಠಾನ: ಸವಾಲುಗಳು ಮತ್ತು ಭವಿಷ್ಯ- ಪಠ್ಯಕ್ರಮ, ಮೌಲ್ಯಮಾಪನ, ಫಲಿತಾಂಶ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಬಿಆರ್ಎಸ್ಎಂ ನ ಮಧ್ಯ ಕ್ಷೇತ್ರೀಯ ಪ್ರಮುಖ್ ಡಾ. ರಘು ಅಕಮಂಚಿ ಮಾತನಾಡಿ, ಶಿಕ್ಷಕರು ಎನ್ಇಪಿಯ ಸಾಧಕ-ಬಾಧಕಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಬುದ್ಧಿಯ ಜೊತೆಗೆ ಹೃದಯಕ್ಕೂ ಶಿಕ್ಷಣ ನೀಡಿ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಬೆಳೆಯುವಂತೆ ಮಾಡುವ ಉದ್ದೇಶ ಈ ಶಿಕ್ಷಣ ನೀತಿಗಿದೆ ಎಂದರು. ಮುಖ್ಯ ಅತಿಥಿ, ಎಬಿಆರ್ಎಸ್ಎಂ ರಾಷ್ಟ್ರೀಯ ಸಂಘಟನಾ ಜೊತೆ ಕಾರ್ಯದರ್ಶಿ ಜಿ. ಲಕ್ಷ್ಮಣ್ ಅವರು ಮಾತನಾಡಿ, ಹೊಸ ಶಿಕ್ಷಣ ನೀತಿ ಹೊಸ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತದೆ ಎಂದರು.
ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಕಾರ್ಯದರ್ಶಿ ಪ್ರೊ. ಮನೀಶ್ ಆರ್. ಜೋಷಿ ದಿಕ್ಸೂಚಿ ಭಾಷಣ ಮಾಡಿದರು.
ಬೆಂಗಳೂರು ಕೆಆರ್ಎಂಎಸ್ಎಸ್ ರಾಜ್ಯಾಧ್ಯಕ್ಷ ಡಾ.ಗುರುನಾಥ್ ಬಡಿಗೇರ್, ಸಲಹಾ ಸಮಿತಿಯ ಮುಖ್ಯಸ್ಥ, ಮಂಗಳೂರು ವಿಶ್ವವಿದ್ಯಾನಿಲಯದ ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಡಾ. ಮಂಜಯ್ಯ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಮೇಶ್ ಕುಮಾರ್ ಮೊದಲಾದವರು ವೇದಿಕೆಯಲ್ಲಿದ್ದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿದರು. ಕೆಆರ್ಎಂಎಸ್ಎಸ್ ಮಂಗಳೂರು ವಿಭಾಗದ ಮುಖ್ಯಸ್ಥೆ ಡಾ.ಸುಧಾ ಎನ್ ವೈದ್ಯ, ಕಾರ್ಯದರ್ಶಿ ವೆಂಕಟೇಶ್ ನಾಯಕ್, ಕೋಶಾಧಿಕಾರಿ ಆಶಾಲತಾ, ಸಂಚಾಲಕಿ ಡಾ. ಶೋಭಾ, ಸಹ-ಸಂಯೋಜಕಿ ಡಾ. ಜ್ಯೋತಿ ಪ್ರಿಯಾ, ಸಂಘಟನಾ ಕಾರ್ಯದರ್ಶಿ ಡಾ. ಸುಭಾಷಿಣಿ ಶ್ರೀವತ್ಸ ಮೊದಲಾದವರು ಉಪಸ್ಥಿತರಿದ್ದರು.
ಕೇರಳದ ಕೇಂದ್ರೀಯ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಕಾವ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಜಿ. ಲಕ್ಷ್ಮಣ್ ಹಾಗೂ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರನ್ನು ಸನ್ಮಾನಿಸಲಾಯಿತು.