ಗೌರಿಲಂಕೇಶ್ ಹತ್ಯೆ: ಸೌದಿ ಅರೇಬಿಯದಲ್ಲಿ ಖಂಡನೆ
ರಿಯಾದ್, ಸೆ. 7: ಹೋರಾಟಗಾರ್ತಿ ಮತ್ತು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ರ ಹತ್ಯೆ ಘಟನೆಯನ್ನು ರಿಯಾದ್ನ ಇಂಡಿಯನ್ ಮೀಡಿಯ ಫೋರಂ(ರಿಂಫ್) ಖಂಡಿಸಿದೆ. ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ದಾಳಿ ಇದೆಂದು ಪತ್ರಿಕಾ ಹೇಳಿಕೆಯಲ್ಲಿ ಮೀಡಿಯ ಫೋರಂ ತಿಳಿಸಿದೆ. ಮಾನವಹಕ್ಕು, ಜಾತ್ಯತೀತತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವನಿಯೆತ್ತುವವರನ್ನು ನಿಶ್ಶಬ್ದಗೊಳಿಸುವ ನೀಚ ಪ್ರವೃತ್ತಿ ಭಾರತದಲ್ಲಿ ಪದೆ ಪದೆ ಜರಗುತ್ತಿದೆ ಎಂದು ಅದು ವಿಷಾದ ವ್ಯಕ್ತಪಡಿಸಿದೆ.
ಗೌರಿ ಲಂಕೇಶ್ ಕೋಮುವಾದ, ಭ್ರಷ್ಟಾಚಾರ, ಕೆಟ್ಟ ರಾಜಕೀಯದ ವಿರುದ್ಧ ಬಲವಾದ ನಿಲುವನ್ನು ತಳೆದವರು.ಆ ದಿಟ್ಟತನ ಹಲವರ ನಿದ್ದೆಗೆಡಿಸಿತು. ಆದ್ದರಿಂದ ನಿರಂತರ ಬೆದರಿಕೆಗಳು ಬರುತ್ತಿದ್ದವು. ನರೇಂದ್ರದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ ಎಂ ಕಲಬುರ್ಗಿಯವರ ಕೊಲೆಗಡುಕರನ್ನು, ಅವರ ಹಿಂದಿರುವ ನಿಗೂಢ ಶಕ್ತಿಯನ್ನು ಈವರೆಗೂ ಶಿಕ್ಷಿಸಲಾಗಿಲ್ಲ. ಇದುವೇ ಗೌರಿ ಲಂಕೇಶ್ರ ಹತ್ಯೆಗೆ ಪ್ರಚೋದಕವಾಗಿದೆ ಎಂದು ಇಂಡಿಯನ್ ಮೀಡಿಯ ಫೋರಂ ಹೇಳಿದೆ. ಕೊಲೆಪಾತಕಿಗಳನ್ನು ಶೀಘ್ರ ಕಾನೂನಿನ ಕೈಗೊಪ್ಪಿಸಬೇಕು ಎಂದು ಆಗ್ರಹಿಸುತ್ತಿದ್ದೇವೆಂದು ಇಂಡಿಯನ್ ಮೀಡಿಯ ಫಾರಂ ಹೇಳಿಕೆಯಲ್ಲಿ ತಿಳಿಸಿದೆ.