ಉಡುಪಿ: ಪೇಜಾವರಶ್ರೀಯನ್ನು ಭೇಟಿಯಾದ ಮೋಹನ್ ಭಾಗವತ್
ಉಡುಪಿ, ನ.23: ಆರೆಸ್ಸೆಸ್ ರಾಷ್ಟ್ರೀಯ ಅಧ್ಯಕ್ಷ ಮೋಹನ್ ಭಾಗವತ್ ಅವರು ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇಂದು ರಾತ್ರಿ ಭೇಟಿಯಾದರು.
ವಿಶ್ವ ಹಿಂದು ಪರಿಷತ್ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಧರ್ಮ ಸಂಸದ್ ಪ್ರಯುಕ್ತ ಉಡುಪಿಗೆ ಆಗಮಿಸಿರುವ ಭಾಗವತ್ ಉಡುಪಿ ಶ್ರೀ ಕೃಷ್ಣಮಠದಲ್ಲಿ ಪೇಜಾವರಶ್ರೀಯೊಂದಿಗೆ ಮಹತ್ವದ ಮಾತುಕತೆ ನಡೆಸಿದರೆನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ಮೋಹನ್ ಭಾಗವತ್ ಅಲ್ಲಿಂದ ನಿರ್ಗಮಿಸಿದರು.
ಬಂದೋಬಸ್ತ್ ಪರಿಶೀಲನೆ ನಡೆಸಿದ ಐಜಿಪಿ
ಧರ್ಮ ಸಂಸದ್ ನಡೆಯುವ ಉಡುಪಿಯ ಕಲ್ಸಂಕ ಬಳಿ ಇರುವ ರಾಯಲ್ ಗಾರ್ಡನ್ಸ್ಗೆ ಐಜಿಪಿ ಹೇಮಂತ್ ನಿಂಬಾಳ್ಕರ್ ಭೇಟಿ ನೀಡಿ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಇದೇ ಸಂದರ್ಭ ಹಿಂದೂ ಸಮಾಜೋತ್ಸವ ನಡೆಯುವ ಮೈದಾನಕ್ಕೂ ಭೇಟಿ ನೀಡಿದರು.
ಬಳಿಕ ಉಡುಪಿ ಎಸ್ಪಿ ಡಾ.ಸಂಜೀವ್ ಪಾಟೀಲ್ ಜೊತೆ ಸಮಾಲೋಚನೆ ನಡೆಸಿ ಭದ್ರತೆ ಬಗ್ಗೆ ಮಾಹಿತಿ ಪಡೆದರು. ಕೆಲ ಸೂಚನೆಗಳನ್ನು ನೀಡಿದರು.
ಉಡುಪಿ ಎಸ್ಪಿ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ವಿವಿಐಪಿ ಸೇರಿದಂತೆ ಎಲ್ಲಾ ಸಂತರ ಬಗ್ಗೆ ಸೂಕ್ತ ರಕ್ಷಣಾ ಕ್ರಮದ ಬಗ್ಗೆ ಸೂಚನೆ ನೀಡಿದರು. ಐಜಿಪಿ ನಾಲ್ಕು ದಿನದ ಬಂದೋಬಸ್ತ್ ಬಗ್ಗೆ ಸಭೆ ನಡೆಸಿದ್ದು, ರವಿವಾರ ನಡೆಯಲಿರುವ ಹಿಂದೂ ಸಮಾಜೋತ್ಸವ ಬಗ್ಗೆ ನಗರದಾದ್ಯಂತ ಬಂದೋಬಸ್ತ್ ಜೊತೆ, ಟ್ರಾಫಿಕ್ ಬಗ್ಗೆ ಮುತುವರ್ಜಿ ವಹಿಸುವಂತೆ ಸೂಚನೆ ನೀಡಿದರು.