ಉಡುಪಿ: ರೈತರ ಸಂಚಾರಿ ತರಕಾರಿ ಮಾರುಕಟ್ಟೆಗೆ ಸಚಿವ ಪ್ರಮೋದ್ ಚಾಲನೆ
ಉಡುಪಿ, ಡಿ.29: ರೈತರು ಬೆಳೆದ ತಾಜಾ ತರಕಾರಿಗಳನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ನೇರವಾಗಿ ಗ್ರಾಹಕರಿಗೆ ಸಿಗುವಂತೆ ಸಂಚಾರಿ ತರಕಾರಿ ಮಾರುಕಟ್ಟೆಗೆ ಶುಕ್ರವಾರ ಮಣಿಪಾಲದಲ್ಲಿ ಚಾಲನೆ ನೀಡಲಾಯಿತು.
ಮಣಿಪಾಲ ಟೈಗರ್ ಸರ್ಕಲ್ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್, ತರಕಾರಿ ಖರೀದಿಸುವ ಮೂಲಕ ಸಂಚಾರಿ ತರಕಾರಿ ಮಾರಾಟ ವ್ಯವಸ್ಥೆಗೆ ಚಾಲನೆ ನೀಡಿದರು.
ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರಿ ಸಂಘ ಬೆನೆಗಲ್- ಕುಕ್ಕೆಹಳ್ಳಿ- ಮಟ್ಟು, ರಾಷ್ಟ್ರೀಯ ಕೃಷಿ ಮತುತಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಕಾರದಲ್ಲಿ ಈ ಸಂಚಾರಿ ತರಕಾರಿ ಮಾರುಕಟ್ಟೆ ಯೋಜನೆಯನ್ನು ಪ್ರಾರಂಭಿಸಿದೆ.
ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರಿ ಸಂಘ ಬೆನೆಗಲ್- ಕುಕ್ಕೆಹಳ್ಳಿ- ಮಟ್ಟು, ರಾಷ್ಟ್ರೀಯ ಕೃಷಿ ಮತುತಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಕಾರದಲ್ಲಿ ಈ ಸಂಚಾರಿ ತರಕಾರಿ ಮಾರುಕಟ್ಟೆ ಯೋಜನೆಯನ್ನು ಪ್ರಾರಂಭಿಸಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರಿಗೆ ತರಕಾರಿ ಮಾರಾಟವಾಗುವುದರಿಂದ ಬೆಳೆ ಬೆಳೆದ ರೈತರಿಗೂ, ಖರೀದಿಸಿದ ಗ್ರಾಹಕರಿಗೂ ಲಾಭವಿದೆ. ಬೆಳೆಗಳಿಗೆ ರಾಸಾಯನಿಕ ಸಿಂಪರಣೆ ಮಾಡುವುದನ್ನು ಕಡಿಮೆ ಮಾಡಬೇಕು. ಕ್ಯಾನ್ಸರ್ ಕಾಯಿಲೆಗೆ ರಾಸಾಯನಿಕಗಳು ಕಾರಣವಾಗುತ್ತಿವೆ. ಸಾವಯವ ಕೃಷಿಗೆ ಆದ್ಯತೆ ನೀಡಬೇಕಿದೆ. ಆರೋಗ್ಯ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ, ನಬಾರ್ಡ್ನ ಎಜಿಎಂ ರಮೇಶ್, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ದೇವಾನಂದ ಉಪಾಧ್ಯಾಯ, ನಗರಸಭಾ ಸದಸ್ಯ ದೇವೇಂದ್ರ ಪ್ರಭು ಮಣಿಪಾಲ, ಬೆಳೆಗಾರರ ಸೊಸೈಟಿ ಅಧ್ಯಕ್ಷ ವಸಂತ ನಾಯ್ಕಾ, ಶಂಕರ ನಾಯ್ಕಾ, ಕೊಕ್ಕರ್ಣೆ ಗ್ರಾಪಂ ಸದಸ್ಯ ವಸಂತ್ ನಾಯ್ಕಾ ಮತ್ತಿತರರು ಉಪಸ್ಥಿತರಿದ್ದರು.
ಮಣಿಪಾಲದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ ನಿರ್ದೇಶಕ ಡಾ. ರವೀಂದ್ರನಾಥ್ ನಾಯಕ್ ಪ್ರಸ್ತಾವನೆಗೈದರು. ಯೋಜನೆಯ ಸಂಯೋಜಕ ಮಣಿಪಾಲ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ ಪ್ರಾಧ್ಯಾಪಕ ಡಾ. ಹರೀಶ್ ಜೋಶಿ ಸ್ವಾಗತಿಸಿದರು. ಬೆಳೆಗಾರರ ಸೊಸೈಟಿಯ ಸಿಇಒ ನಾಗರಾಜ ಉಳಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ಸದ್ಯಕ್ಕೆ ಮಣಿಪಾಲದ ಟೈಗರ್ ಸರ್ಕಲ್, ಎಂಐಟಿ ಕ್ಯಾಂಪಸ್ ಎದುರು, ಸಿಂಡಿಕೇಟ್ ಸರ್ಕಲ್, ಡಿಸಿ ಆಫೀಸ್ ಸರ್ಕಲ್, ಆರ್ಎಸ್ಬಿ ಸಭಾಭವನದ ಬಳಿ, ಉಡುಪಿಯ ಅಂಬಲಪಾಡಿ ಮೈನ್ರೋಡ್, ಭುಜಂಗ ಪಾರ್ಕ್, ಪರ್ಕಳ, ಆದಿಉಡುಪಿ, ಶಿರಿಬೀಡು, ಆತ್ರಾಡಿ ಬಳಿಯಲ್ಲಿ ಸಂಚಾರಿ ತರಕಾರಿ ಮಾರುಕಟ್ಟೆ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ರೈತರಲ್ಲಿ ಚರ್ಚೆ ಬೇಡ
ನಾವು ಹೊಟೇಲ್ಗಳಿಗೆ ಹೋಗಿ ಅಲ್ಲಿ ಬೇಕಾದುದನ್ನು ತಿಂದು ಅವರು ಕೊಟ್ಟ ಬಿಲ್ ಎಷ್ಟಿದ್ದರೂ ಪ್ರಶ್ನಿಸದೇ ಹಣ ಪಾವತಿಸಿ ಬರುತ್ತೇವೆ. ಆದರೆ ಅದೇ ವ್ಯಕ್ತಿ ತರಕಾರಿ ಖರೀದಿಸುವಾಗ ಮಾರಾಟಗಾರನೊಂದಿಗೆ ಹೇಳಿದ ದರಕ್ಕೆ ಚರ್ಚೆ ಗಿಳಿಯುತ್ತಾನೆ. ಕೊನೆಗೆ ಬೆಳೆಗಾರ ಬೇಸತ್ತು, ತನಗೆ ನಷ್ಟವಾದರೂ ಅನ್ಯ ದಾರಿ ಕಾಣದೆ ಕಡಿಮೆ ಬೆಲೆಗೆ ಕೊಡುತ್ತಾನೆ. ಕಷ್ಟಪಟ್ಟು ಬೆಳೆಯುವ ರೈತನಲ್ಲಿ ಚರ್ಚೆ ಮಾಡಬೇಡಿ. -ಪ್ರಮೋದ್ ಮಧ್ವರಾಜ್, ಸಚಿವರು.