ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಿ: ಶಬ್ಬೀರ್ ಅಹ್ಮದ್ ಖಾನ್
ಉಡುಪಿ, ಫೆ.18: ಮುಸ್ಲಿಮರು ಸುಧಾರಣೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಶ್ರಮಿಸಿ ರಾಷ್ಟ್ರದ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮನುಷ್ಯರನ್ನೇ ವಿಭಜಿಸಿ ಉಚ್ಛ ನೀಚರಾಗಿಸಿದ ಅಸಮಾನತೆಯ ಸಮಾಜದ ಸುಧಾರಣೆಯು ಮಾನವೀಯ ಮತ್ತು ಅನುಕಂಪದಿಂದ ಆಗಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಇದರ ರಾಜ್ಯ ಸಲಹಾ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಶಾಖೆಯ ವತಿಯಿಂದ ಉಡುಪಿ ಜಾಮೀಯ ಮಸೀದಿಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಪ್ರಸಕ್ತ ಸನ್ನಿವೇಶ; ನಮ್ಮ ಹೊಣೆಗಾರಿಕೆಗಳು’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಖಂಡ ಖಂಡವಾಗಿದ್ದ ಭಾರತ ದೇಶವನ್ನು ಒಂದುಗೂಡಿಸಿ ಅಖಂಡ ಹಿಂದುಸ್ತಾನ ಎಂಬ ಹೆಸರು ಕೊಟ್ಟಿರುವುದು ಭಾರತಕ್ಕೆ ಮುಸ್ಲಿಮರ ನೀಡಿದ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ. ಆದರೆ ಮತ್ತೆ ಈ ರಾಷ್ಟ್ರವನ್ನು ವಿಭಜನೆ ಮಾಡಿರುವುದು ದೇಶದ್ರೋಹಿಗಳು ಮತ್ತು ಬ್ರಿಟಿಷರಾಗಿದ್ದಾರೆ ಎಂದರು.
ದೇವನ ನೈಸರ್ಗಿಕ ವ್ಯವಸ್ಥೆಯೇ ಎಲ್ಲಾ ವ್ಯವಸ್ಥೆಗಳ ಮೇಲೆ ಮೇಲ್ಮೈ ಸಾಧಿಸಲಿಕ್ಕಾಗಿ ಆಗಿದೆ. ನಿಸ್ವಾರ್ಥ ಸೇವೆ ಮಾಡುವವನಿಗೆ ದೇವನಿಂದ ಅಪಾರ ಪ್ರತಿಫಲ ದೊರಕಲಿದೆ ಎಂದು ಅವರು ತಿಳಿಸಿದರು.
ಭೂಮಿಯಲ್ಲಿ ವಾಸಿಸುವ ಸರ್ವ ಜನರು ಈ ಭೂಮಿ ಆಕಾಶಗಳ ಒಡೆಯನ ದಾಸರಾಗಿದ್ದಾರೆ. ಆತ ಸಕಲ ವಿಶ್ವದ ಪ್ರಭುವಾಗಿದ್ದಾನೆ. ಈ ವಿಷಯವನ್ನು ಸರ್ವ ಜನರಿಗೆ ಮನದಟ್ಟು ಮಾಡುವುದು ಮುಸ್ಲಿಮ್ ಸಮುದಾಯದ ಹೊಣೆ ಗಾರಿಕೆಯಾಗಿದೆ ಎಂದು ಅವರು ಹೇಳಿದರು.
ಸ್ಥಾನೀಯ ಕಾರ್ಯದರ್ಶಿ ನಿಸಾರ್ ಅಹ್ಮದ್ ಸ್ವಾಗತಿಸಿದರು.