ದಲಿತರ ಅಸ್ಮಿತೆ, ಸ್ವಾಭಿಮಾನಕ್ಕೆ ಹಿಂದುತ್ವವಾದಿಗಳಿಂದ ಸವಾಲು: ಜಿ.ರಾಜಶೇಖರ್
ಉಡುಪಿ, ಮಾ.24: ದಲಿತರ ಅಸ್ಮಿತೆ, ಅಭಿಮಾನ, ಸ್ವಾಭಿಮಾನಕ್ಕೆ ಸವಾಲು ಹಾಕುವವರು ಇಂದು ಈ ದೇಶದ ಅಧಿಕಾರ ಪಡೆದುಕೊಂಡಿದ್ದಾರೆ. ಅವರಿಂದ ದಲಿತರು ಮಾತ್ರವಲ್ಲ ಯಾರಿಗೂ ಉಳಿಗಾಲ ಇಲ್ಲ ಎಂಬುದು ದಿನೇ ದಿನೇ ಖಾತ್ರಿಯಾಗುತ್ತಿದೆ. ಹೀಗಾಗಿ ಅಂಬೇಡ್ಕರ್ ರೂಪಿಸಿದ ಸಂವಿಧಾನ ಇಂದು ಅತ್ಯಂತ ಅಪಾಯದ ಸ್ಥಿತಿಯಲ್ಲಿದೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಮತ್ತು ದಲಿತ ಹಿಂದು ಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ(ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ) ವತಿಯಿಂದ ಅಜ್ಜರಕಾಡಿನ ಹುತಾತ್ಮ ಚೌಕದ ಬಳಿ ಇಂದು ಹಮ್ಮಿಕೊಳ್ಳಲಾದ ಮಹಾಡ್ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಹಿಂದುತ್ವವಾದಿಗಳ ಸರಕಾರ ಈ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್ ರೂಪಿಸಿದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವು ಅಪಾಯಕ್ಕೆ ಒಳಗಾಗಿದೆ. ಅದೇ ರೀತಿ ಪ್ರಜೆಗಳ ಸ್ವಾತಂತ್ರ, ಸ್ವಾಭಿಮಾನ, ಅಸ್ಮಿತೆ ಎಲ್ಲವೂ ಅಪಾಯಕ್ಕೆ ಒಳಗಾಗಿದೆ ಎಂದ ಅವರು, ದಲಿತರ ಮೇಲಿನ ಹಿಂಸೆಯು ಈ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಭೀಕರ ದುಸ್ಥಿತಿಗೆ ಒಂದು ರೂಪಕ ವಾಗಿದೆ. ದೇಶದಲ್ಲಿ ನಾಗರಿಕ ಹಕ್ಕು, ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ದುಸ್ಥಿತಿಯಾಗಿದೆ ಎಂದರು.
ಲಿಂಗಬೇಧ ಇಲ್ಲದೆ ಎಲ್ಲ ಪ್ರಜೆಗಳು ಸಮಾನರು ಎಂಬ ಸಂವಿಧಾನ ರೂಪಿಸಿದ ಡಾ.ಬಿ.ಆರ್.ಅಂಬೇಡ್ಕರ್ರ ಹೋರಾಟ ಬದುಕಿನ ಮೊದಲ ನಿರ್ಣಯಕ ಹೆಜ್ಜೆ ಮಹಾಡ್ ಚಳವಳಿ. ದಲಿತರ ಮೇಲೆ ಹಿಂಸೆ ಸ್ವಾತಂತ್ರ ಭಾರತದಲ್ಲಿ ಮತ್ತೆ ಮತ್ತೆ ಮರಳುಕಳಿಸುತ್ತಲೇ ಇದೆ. ಇದನ್ನು ಈ ದೇಶದ ದಲಿತರು ಅನುಭವಿ ಸಿದರೆ, ಅಂಬೇಡ್ಕರ್ ಅದನ್ನು ಮನಗಂಡಿದ್ದರು ಎಂದು ಅವರು ತಿಳಿಸಿದರು.
ಮಹಾಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ತಲ್ಲೂರು ಮಾತನಾಡಿ, ಕೇವಲ ಆರೆಸ್ಸೆಸ್ ಪರ ಧ್ವನಿ ಎತ್ತುವ ಬಿಜೆಪಿ ಸಂಸದರು ದಲಿತರು, ಅಲ್ಪಸಂಖ್ಯಾ ತರ ಸಮಸ್ಯೆಗಳ ಬಗ್ಗೆ ವೌನ ವಹಿಸುತ್ತಿದ್ದಾರೆ. ದೇಶದ ಸಂವಿಧಾನ ಬದಲಾವಣೆ ಮಾಡುವ ಕಾರ್ಯಕ್ಕೆ ಕೈ ಹಾಕಿದರೆ ಅದಕ್ಕೆ ತಕ್ಕ ಉತ್ತರ ನೀಡಲಾಗು ವುದು ಎಂದು ಎಚ್ಚರಿಕೆ ನೀಡಿದರು.
ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮ ರಾಜ್ ಬಿರ್ತಿ, ಮಹಾ ಒಕ್ಕೂಟದ ಗೌರವಾಧ್ಯಕ್ಷ ಸುಂದರ್ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಅನಂತ ಮಚ್ಚಟ್ಟು, ಎಸ್.ಎಸ್.ಪ್ರಸಾದ್, ಪ್ರೊ.ಫಣಿರಾಜ್, ಚಂದ್ರಮ ತಲ್ಲೂರು, ಪ್ರೊ.ಸಿರಿಲ್ ಮಥಾಯಸ್, ಅಬ್ದುಲ್ ಅಝೀಝ್ ಉದ್ಯಾವರ, ಶ್ಯಾಮ್ಸುಂದರ್ ತೆಕ್ಕಟ್ಟೆ, ಶ್ರೀನಿವಾಸ ವಡ್ಡರ್ಸೆ, ಆರತಿ ಗಿಳಿ ಯಾರು, ಫಾತಿಮಾ ಗಿಳಿಯಾರು ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಬೋರ್ಡ್ ಹೈಸ್ಕೂಲ್ ಬಳಿಯಿಂದ ಮೆರವಣಿಗೆ ಹೊರಟು ಅಜ್ಜರಕಾಡಿನಲ್ಲಿ ಸಮಾಪನಗೊಂಡಿತು.