ಪೆಟ್ರೋಲ್, ಡೀಸೆಲ್ ಹೆಸರಿನಲ್ಲಿ ಮೋದಿ ಸರಕಾರದಿಂದ ಹಗಲು ದರೋಡೆ : ಹರೀಶ್ ಕಿಣಿ
ಉಡುಪಿ, ಎ.3: ಅಧಿಕಾರಕ್ಕೆ ಬಂದ 4 ವರ್ಷಗಳಲ್ಲಿ 9 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಏರಿಸುವ ಮೂಲಕ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ, ದೇಶದ ಜನರ ಹಗಲು ದರೋಡೆ ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ಆರೋಪಿಸಿದ್ದಾರೆ.
2013ರಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್ಗೆ 120ಕ್ಕೂ ಹೆಚ್ಚು ಡಾಲರ್ ಗಳಿದ್ದಾಗ ಪ್ರತೀ ಲೀಟರ್ ಪೆಟ್ರೋಲ್ ದರ 70ರೂ. ಮತ್ತು ಡೀಸೆಲ್ ದರ 60 ರೂ.ಗಳಿತ್ತು. ಅಂದು ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರಕಾರ ದೇಶದಲ್ಲಿತ್ತು. ಆದರೆ ಇದೀಗ ಕಚ್ಚಾತೈಲದ ಬೆಲೆ ಬ್ಯಾರಲ್ಗೆ 65 ಡಾಲರ್ ಗಳಾದರೂ ಪ್ರತೀ ಲೀಟರ್ ಪೆಟೋಲ್ ಬೆಲೆ 75ರೂ. ಮತ್ತು ಡೀಸೆಲ್ ಬೆಲೆ 65ರೂ.ಗಳಾಗಿವೆ.
ಅಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ನೆರೆಯ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅತೀ ಹೆಚ್ಚಾಗಿತ್ತು. 2 ಬಾರಿ ರಾಜ್ಯದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಿ ಇಂದು ನೆರೆಯ ರಾಜ್ಯಗಳಿಗೆ ಹೋಲಿಸಿದಾಗ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅತೀ ಕಡಿಮೆ ಇದೆ. ಕೂಡಲೇ ಮೋದಿ ಸರಕಾರ ಹಗಲು ದರೋಡೆ ನಿಲ್ಲಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿ ದೇಶದ ಜನರಿಗೆ ನ್ಯಾಯ ಒದಗಿಸಬೇಕು ಎಂದು ಅಲೆವೂರು ಹರೀಶ್ ಕಿಣಿ ಆಗ್ರಹಿಸಿದ್ದಾರೆ.