ಧರ್ಮಾಧಾರದಲ್ಲಿ ದೇಶ ಒಡೆಯಲು ಅವಕಾಶ ನೀಡದಿರಿ: ರಿಚಾ ಸಿಂಗ್
ಮಂಗಳೂರು, ಎ.28: ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದ್ದು, ದೇಶದ ಯುವ ಶಕ್ತಿ ಇದಕ್ಕೆ ಅವಕಾಶ ನೀಡಬಾರದು ಎಂದು ಅಲಹಾಬಾದ್ ವಿಶ್ವವಿದ್ಯಾನಿಲಯದ ಅಖಿಲ ಭಾರತ ವಿದ್ಯಾರ್ಥಿ ನಾಯಕಿ ರಿಚಾ ಸಿಂಗ್ ಹೇಳಿದ್ದಾರೆ.
ಸಂವಿಧಾನ ಉಳಿವಿಗಾಗಿ ಕರ್ನಾಟಕ ವತಿಯಿಂದ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಬಳಿಯ ಯುನಿಟಿ ಸಭಾಂಗಣದಲ್ಲಿ ಶನಿವಾರ ನಡೆದ ‘ಸ್ವಾಭಿಮಾನಿ ಸಮಾವೇಶ’ದಲ್ಲಿ ಮಾತನಾಡುತ್ತಿದ್ದರು.
ವಿವಿಧ, ಜಾತಿ, ಮತ, ಧರ್ಮದ ಬುನಾದಿಯಲ್ಲೇ ಈ ದೇಶ ನಿರ್ಮಾಣಗೊಂಡಿದ್ದು, ಪ್ರತಿಯೊಬ್ಬ ಪ್ರಜೆಗೂ ಜೀವಿಸುವ ಹಕ್ಕನ್ನು ದೇಶದ ಸಂವಿಧಾನ ನೀಡಿದೆ. ದೇಶದಲ್ಲಿ ಗೋವಿನ ವಿಚಾರವಾಗಿ ಮುಸ್ಲಿಮರ ಮತ್ತು ದಲಿತರ ಕೊಲೆ, ಹಲ್ಲೆಗಳು ನಡೆಯುತ್ತಿವೆ. ಇಂತಹ ಘಟನೆಗಳ ವಿರುದ್ಧ ಸೆಟೆದು ನಿಲ್ಲಲು ಮುಸ್ಲಿಮರು ಮತ್ತು ದಲಿತರು ಒಗ್ಗೂಡಿ ಬೃಹತ್ ಶಕ್ತಿಯಾಗಿ ರೂಪುಗೊಳ್ಳಬೇಕಾಗಿರುವುದು ಇಂದಿನ ಅಗತ್ಯ ಎಂದರು.
ದೇಶದ ಸಂವಿಧಾನವನ್ನು ಬದಲಿಸುವ ಬಗ್ಗೆ ಜನಪ್ರತಿನಿಧಿಗಳ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ರಿಚಾ ಸಿಂಗ್, ಭಾರತದ ಇತಿಹಾಸವನ್ನು ಅವರು ಸರಿಯಾಗಿ ಅಧ್ಯಯನ ಮಾಡಿಲ್ಲ. ಆದ್ದರಿಂದ ಬಿಜೆಪಿಗರು ಮೊದಲು ಭಾರತದ ಇತಿಹಾಸವನ್ನು ಅಧ್ಯಯನ ಮಾಡಲಿ ಎಂದು ಹೇಳಿದರು.