ಸೂಸಗಡಿ: ಹೋಬಳಿ ಮಟ್ಟದ ಕಂದಾಯ-ಪಿಂಚಣಿ ಅದಾಲತ್
ಭಟ್ಕಳ, ಅ.27: ಅಕ್ಟೋಬರ್ ತಿಂಗಳ ಸೂಸಗಡಿ ಹೋಬಳಿ ಮಟ್ಟದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವು ಇಲ್ಲಿನ ತಾಲೂಕು ಕಚೇರಿಯ ಆವರಣದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಸುಮಾರು 25 ಫಲಾನುಭವಿಗಳಿಗೆ ವಿವಿಧ ಯೋಜನೆಯಡಿಯಲ್ಲಿ ಮಂಜೂರಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ಮಾತನಾಡಿ, ಸರಕಾರದ ಯೋಜನೆಗಳು ಬಡವರಿಗೆ ನೇರವಾಗಿ ತಲುಪಬೇಕು ಎನ್ನುವುದು ಈ ಅದಾಲತ್ನ ಉದ್ದೇಶವಾಗಿದೆ. ಕಂದಾಯ ಅಧಿಕಾರಿಗಳು, ಸಿಬ್ಬಂದಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಭೆಯಲ್ಲಿ ಹಾಜರಿದ್ದ ಆಶಕ್ತ ಅಂಗವಿಕಲರೋರ್ವರಿಗೆ ಸ್ಥಳದಲ್ಲಿಯೇ ಮಾಶಾಶನ ಮಂಜೂರು ಮಾಡುವಂತೆ ಆದೇಶಿಸಿ ಮಾನವೀಯತೆಯನ್ನು ಮೆರೆದ ಅವರು ಇಂತಹ ಬಡವರು ಅಶಕ್ತರು ಕಚೇರಿಗೆ ಬಂದಾಗ ಮಾನವೀಯತೆಯಿಂದ ವರ್ತಿಸಿ ಎಂದೂ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಈ ಸಂದರ್ಭ ತಹಶೀಲ್ದಾರ್ ವಿ.ಎನ್.ಬಾಡಕರ್, ವೃತ್ತ ನಿರೀಕ್ಷಕ ಗಣಪತಿ ಮೇತ್ರಿ, ಕಚೇರಿ ಸಿಬ್ಬಂದಿ ವಿಶ್ವನಾಥ ಕರಡೆ, ಶೀಲಾ, ಗ್ರಾಮ ಲೆಕ್ಕಾಧಿಕಾರಿಗಳಾದ ಶಂಭು ಕೆ., ಅಣ್ಣಯ್ಯ, ವಿಶ್ವನಾಥ ಗಾಂವ್ಕರ್, ಹೇಮಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು