ಸುಶಿಕ್ಷಿತ, ನೈತಿಕತೆಯ ಸಮಾಜ ದೇಶದ ಇಂದಿನ ಅಗತ್ಯ : ಸಚಿವ ಜಮೀರ್ ಅಹ್ಮದ್ ಖಾನ್
ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾ ಅರಬಿಯ್ಯಾ ವಾರ್ಷಿಕ ಮತ್ತು ಸನದುದಾನ ಸಮ್ಮೇಳನ
ಮಲಪ್ಪುರಂ, ಜ. 14: ಶಿಕ್ಷಣ ಮತ್ತು ನೈತಿಕತೆಯುಳ್ಳ ಒಂದು ಜನತೆಯಾಗಿದೆ ದೇಶದ ಮುಖ್ಯ ಅಗತ್ಯತೆ ಎಂದು ರಾಜ್ಯ ವಕ್ಫ್ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟರು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಈ ನಿಟ್ಟಿನಲ್ಲಿ ದೇಶದಲ್ಲಿ ಬಹಳ ಸಕಾರಾತ್ಮಕ ಫಲಿತಾಂಶ ಬೀರುತ್ತಿದೆ ಎಂದು ಹೇಳಿದ ಅವರು ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾ ಅರಬಿಯ್ಯಾದ 56ನೇ ವಾರ್ಷಿಕ ಮತ್ತು 54ನೇ ಸನದುದಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಜಾಮಿಅ ನೂರಿಯ್ಯಾ ಮತ್ತು ಸಮಸ್ತದ ಇನ್ನಿತರ ಶೈಕ್ಷಣಿಕ ಸಂಸ್ಥೆಗಳು ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಕರ್ಣಾಟಕದ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಸಚಿವನಾಗಿ ಹಲವು ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದು, ಜಾಮಿಅ ನೂರಿಯ್ಯಾದಂತಹ ಬೃಹತ್ ಶಿಕ್ಷಣ ಸಂಸ್ಥೆ ಸಮಸ್ತದ ನೇತೃತ್ವದಲ್ಲಿ ಕರ್ನಾಟಕದಲ್ಲೂ ಸ್ಥಾಪನೆಯಾಗಲಿ ಎಂದು ಅವರು ಹೇಳಿದರು.
ಸಮಾರೋಪ ಸಮಾರಂಭವನ್ನು ಇಂಟರ್ನ್ಯಾಷನಲ್ ಯೂನಿಯನ್ ಆಫ್ ಯೂನಿವರ್ಸಿಟೀಸ್ ಅಧ್ಯಕ್ಷ ಡಾ. ಮುಹಮ್ಮದ್ ಶೈಖ್ ಗಬ್ಬಾನಿ ಅಲ್ ಹುಸೈನಿ ಉದ್ಘಾಟಿಸಿದರು.
ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ಸನದುದಾನ ಕಾರ್ಯಕ್ರಮ ನಿರ್ವಹಿಸಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಮುಖ್ಯ ಪ್ರಭಾಷಣ ನಡೆಸಿದರು. ಜಾಮಿಅ ನೂರಿಯ್ಯಾ ಅರಬಿಯ್ಯಾ ಪ್ರಾಂಶುಪಾಲರಾದ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್ ಸನದುದಾನ ಪ್ರಭಾಷಣ ನಡೆಸಿದರು.
ಬ್ರೂಣೆ ಹೈ ಕಮೀಷನ್ ದಾತೋ ಹಾಜಿ ಸಿದ್ದೀಕ್ ಅಲಿ, ಶೈಖ್ ಯಾಕೂಬ್ ಮುಹಮ್ಮದ್ ಅಲ್ ರಾಬಿ ಒಮಾನ್, ಡಾ. ಸಲಾಹುದ್ದೀನ್ ಇಬ್ನ್ ಶೈಖ್ ಅಲ್ ಬದವಿ, ಅಬ್ದುಲ್ ಮುಹಮ್ಮದ್ ಅಲ್ ಹಂಜರ್, ಸಂಸದರಾದ ಪಿ.ಕೆ. ಕುಞ್ಞಾಲಿ ಕುಟ್ಟಿ, ಇ.ಟಿ. ಮುಹಮ್ಮದ್ ಬಶೀರ್, ಪಿ.ಕೆ.ಪಿ. ಅಬ್ದುಸ್ಸಲಾಂ ಮುಸ್ಲಿಯಾರ್, ಸಿ.ಕೆ.ಎಂ ಸಾದಿಕ್ ಮುಸ್ಲಿಯಾರ್, ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಕೋಝಿಕ್ಕೋಡ್ ಖಾಝಿ ಮುಹಮ್ಮದ್ ಜಮಲ್ಲುಲೈಲಿ ತಂಙಳ್, ಚೇಲಕ್ಕಾಡ್ ಮುಹಮ್ಮದ್ ಮುಸ್ಲಿಯಾರ್, ಡಾ. ಬಹಾವುದ್ದೀನ್ ಮುಹಮ್ಮದ್ ನದ್ವಿ, ಎ.ಮರಕ್ಕಾರ್ ಮುಸ್ಲಿಯಾರ್, ಕೋಟುಮಲ ಮುಹಿಯುದ್ದೀನ್ ಕುಟ್ಚಿ ಮುಸ್ಲಿಯಾರ್, ಎಂ.ಪಿ. ಅಬ್ದುಸ್ಸಮದ್ ಸಮದಾನಿ, ಅಬ್ದುಸ್ಸಮದ್ ಪೂಕಟೂರ್, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ವಿ. ಮೊಯಿಮೂನ್ ಹಾಜಿ ಮುಕ್ಕಂ ಮುಂತಾದವರು ಮಾತನಾಡಿದರು. ಸಯ್ಯಿದ್ ಸಾದಿಕಲಿ ಶಿಹಾಬ್ ತಂಙಳ್ ಸ್ವಾಗತ ಮಾಡಿದರು.
► ಈ ಬಾರಿ 239 ನವ ಬಿರುದುದಾರಿಗಳು ಸೇರಿದಂತೆ ಒಟ್ಟು 6975 ಫೈಝಿ ವಿದ್ವಾಂಸರು ಜಾಮಿಅ ನೂರಿಯ್ಯಾ ಅರಬಿಯ್ಯಾದಿಂದ ಬಿರುದು ಪಡೆದುಕೊಂಡರು.
► ಇಂಟರ್ನ್ಯಾಷನಲ್ ಯೂನಿಯನ್ ಆಫ್ ಯೂನಿವರ್ಸಿಟೀಸ್ ಸದಸ್ಯತ್ವವನ್ನು ಜಾಮಿಅ ನೂರಿಯ್ಯಾ ಅರಬಿಯ್ಯಾಗೆ ನೀಡಿರುವುದಾಗಿ ಯೂನಿವರ್ಸಿಟಿ ಸಮಿತಿ ಅಧ್ಯಕ್ಷ ಮುಹಮ್ಮದ್ ಶೈಖ್ ಗಬ್ಬಾನಿ ಅಲ್ ಹುಸೈನಿ ಸಮಾರಂಭದಲ್ಲಿ ಘೋಷಣೆ ಮಾಡಿದರು
► ಜಾಮಿಅ ನೂರಿಯ್ಯಾ ಅರಬಿಯ್ಯಾದ ಕರ್ನಾಟಕ ವಿದ್ಯಾರ್ಥಿಗಳ ವತಿಯಿಂದ ಸಮ್ಮೇಳನದ ಭಾಗವಾಗಿ ಬೃಹತ್ ಕನ್ನಡ ಸಂಗಮ ಕಾರ್ಯಕ್ರಮ ನಡೆಯಿತು