ಅದಾನಿ ಸಿಎಸ್ಆರ್ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಗುರಿ ಹೊಂದಿದೆ: ಕಿಶೋರ್ ಆಳ್ವ
ಪಡುಬಿದ್ರಿ: ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಅದಾನಿ ಯುಪಿಸಿಎಲ್ ಸಿಎಸ್ಆರ್ ಅನುದಾನದಲ್ಲಿ ಶೇ. 15% ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನಿಯೋಜಿಸುತ್ತಿದೆ ಎಂದು ಅದಾನಿ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಆಳ್ವ ಹೇಳಿದರು.
ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಯುಪಿಸಿಎಲ್ ಕಂಪನಿಯು ತನ್ನ ಸಿಎಸ್ಆರ್ ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್ ಸ್ಥಾವರದ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಬಳಿಕ ಮಾತನಾಡಿದ ಕಿಶೋರ್ ಆಳ್ವ, ಯುಪಿಸಿಎಲ್ ಅದಾನಿ ಸಮೂಹಕ್ಕೆ ಸೇರಿ 5 ವರ್ಷಗಳಾಗಿದ್ದು, ಸತತವಾಗಿ 5 ವರ್ಷಗಳಿಂದ ಬೃಹತ್ ಪ್ರಮಾಣದಲ್ಲಿ ಸ್ಥಾವರದ ಆಸುಪಾಸಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಪರಿಕರಗಳನ್ನು ಒದಗಿಸುತ್ತಿದೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಸುಮಾರು ರೂ. 70 ಲಕ್ಷದಷ್ಟು ಅನುದಾನವನ್ನು ಈ ಕಾರ್ಯಕ್ರಮಕ್ಕೆ ಅದಾನಿ ಫೌಂಡೇಶನ್ ಮೀಸಲಿಟ್ಟಿದೆ. ವಿದ್ಯಾರ್ಥಿಗಳಿಗೆ ಪರಿಕರಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿದ್ದು, ಕೆಲ ವರ್ಷಗಳಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸ ತಂದಿದೆ ಎಂದು ಆಳ್ವ ತಿಳಿಸಿದರು.
ಅದಾನಿ ಫೌಂಡೇಶನ್ನ ಸಿಎಸ್ಆರ್ ಯೋಜನೆಗಳಲ್ಲಿ ಶಿಕ್ಷಣ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸಲು ಸಂಸ್ಥೆಯು ಶ್ರಮಿಸುತ್ತಿದೆ. ಈ ಕ್ಷೇತ್ರದಲ್ಲಿ ಶಿಕ್ಷಣ ಪರಿಕರ ವಿತರಣೆ, ವಿದ್ಯಾರ್ಥಿವೇತನ ವಿತರಣೆ, ಹಣಕಾಸಿನ ಕೊರತೆ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಅನುದಾನ, ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲು ಲ್ಯಾಪ್ ಟಾಪ್ ಕಂಪ್ಯೂಟರ್ ವಿತರಣೆ, ಶಾಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ, ಶೌಚಾಲಯ ನಿರ್ಮಾಣ ಒಳಗೊಂಡಿದೆ.
ವಿದ್ಯಾರ್ಥಿಗಳಿಗೆ ಉಡಾನ್ ಯೋಜನೆ: ಶಾಲೆಯ ವಿದ್ಯಾರ್ಥಿಗಳಿಗೆ ಉಡಾನ್ ಎಂಬ ವಿನೂತನ ಯೋಜನೆ ನಿರ್ವಹಿಸುತ್ತಿದೆ. ಉಡಾನ್ ಯೋಜನೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಾವರವನ್ನು ಭೇಟಿ ನೀಡಿ ಸ್ಥಾವರದ ಕಾರ್ಯವೈಖರಿ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣಿಕ ಜ್ಞಾನವನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಉಡಾನ್ ಕಾರ್ಯಕ್ರಮವು ಅದಾನಿ ಫೌಂಡೇಷನ್ ಸಂಸ್ಥೆಯು ಇಡೀ ದೇಶದಲ್ಲೇ ಆಯೋಜಿಸುತ್ತಿದ್ದು, ಈ ಕಾರ್ಯದಡಿಯಲ್ಲಿ ಸುಮಾರು 1 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದೆ ಎಂದು ತಿಳಿಸಿದರು.