ಕೊಣಾಜೆ: ಪಿಡಿಒ, ಪಂಚಾಯತ್ ಸದಸ್ಯನ ಮೇಲೆ ಹಲ್ಲೆ; ಇಬ್ಬರ ಬಂಧನ
ಕೊಣಾಜೆ: ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ಕೇಳಲು ತೆರಳಿದ್ದ ಕೊಣಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯನ ಮೇಲೆ ಇಬ್ಬರು ಪಾನಮತ್ತರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನೋಳಿಯ ಸುರೇಂದ್ರ ಹಾಗೂ ಮಾಡೂರು ಸಮೀಪದ ಯೋಗೀಶ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಅಸೈಗೋಳಿ ಸಮೀಪದ ಅನಧಿಕೃತ ಪಾಸ್ಟ್ ಫುಡ್ ಅಂಗಡಿಯೊಂದಕ್ಕೆ ಕೊಣಾಜೆ ಪಂಚಾಯತ್ ಪಿಡಿಒ ಸವಿತಾ ಮತ್ತು ಪಂಚಾಯತ್ ಕಾರ್ಯದರ್ಶಿ ಶಾಲಿನಿ, ಸಿಬ್ಬಂದಿ ಭರತ್ ಅವರು ಕಸ ಹಾಗೂ ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ಕೇಳಲು ತೆರಳಿದ್ದು, ಈ ಸಂದರ್ಭ ಅಂಗಡಿಯ ಬಳಿ ಕುಳಿತಿದ್ದ ಸುರೇಂದ್ರ ಹಾಗೂ ಯೋಗೀಶ್ ಪಿಡಿಒ ಅವರಲ್ಲಿ ನಿಮಗೆ ಅವೆಲ್ಲಾ ಯಾಕೆ ಎಂದು ಪ್ರಶ್ನಿಸಿದಲ್ಲದೆ ಅವ್ಯಾಚ್ಯವಾಗಿ ನಿಂದಿಸಿ, ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದು, ಇದರಿಂದ ಭಯಗೊಂಡ ಸವಿತಾ ಅವರು ಪೊಲೀಸರಿಗೆ ಫೋನ್ ಮಾಡಿದಾಗ ಆರೋಪಿಗಳು ಫೋನ್ ಕಸಿಯಲು ಯತ್ನಿಸಿ, ಹಲ್ಲೆ ನಡೆಸಿದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.