ಸಾಹಿತ್ಯಕ್ಕೆ ಸಾವಿಲ್ಲ: ಫಾ. ರೊನಾಲ್ಡ್ ಸೆರಾವೊ
ದಿ. ವಿಕ್ಟರ್ ರೊಡ್ರಿಗಸ್ ಸ್ಮಾರಕ ಸಾಹಿತ್ಯ ಪ್ರಶಸ್ತಿ ಪ್ರದಾನ
ಮಂಗಳೂರು: ಸಾಹಿತಿ ಸಾಯಬಹುದು ಆದರೆ ಆತ ರಚಿಸಿದ ಸಾಹಿತ್ಯದ ಮೂಲಕ ಆತ ಸದಾ ಕಾಲ ಜೀವಂತವಿರುತ್ತಾನೆ. ಕೊಂಕಣಿ ಸಾಹಿತಿ ದಿ. ವಿಕ್ಟರ್ ರೊಡ್ರಿಗಸ್ ಅವರೂ ತಮ್ಮ ಸಾಹಿತ್ಯದ ರೂಪದಲ್ಲಿ ಜೀವಂತವಾಗಿದ್ದಾರೆ ಎಂದು ಜೆಪ್ಪು ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಫಾ. ರೊನಾಲ್ಡ್ ಸೆರಾವೊ ಹೇಳಿದರು.
ಅವರು ಬಿಕರ್ನಕಟ್ಟೆ ಬಾಲ ಯೇಸು ಸಭಾಭವನದಲ್ಲಿ ದಿ. ವಿಕ್ಟರ್ ರೊಡ್ರಿಗಸ್ ಸ್ಮಾರಕ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಸಂದೇಶ ನೀಡಿದರು.
ಸಮನ್ವಯ ಸಂಸ್ಥೆ ಪ್ರತಿ ವರ್ಷ ವಿತರಿಸುವ ಈ ಪಶಸ್ತಿಯನ್ನು ಅಮೆರಿಕದ ಚಿಕಾಗೊ ನಗರದಲ್ಲಿರುವ ಡಾ. ಆಸ್ಟಿನ್ ಡಿಸೋಜ ಅವರಿಗೆ ಪ್ರದಾನ ಮಾಡಲಾಯಿತು. ಕೊಂಕಣೆಯ ಮೇಲಿನ ತಮ್ಮ ಪ್ರೀತಿಗೆ ಮದ್ದಿಲ್ಲ, ಅದೊಂದು ಗುಣವಾಗದ ಕಾಯಿಲೆಯಂತೆ ಎಂದು ಸನ್ಮಾನ ಸ್ವೀಕರಿಸಿ ಆಸ್ಟಿನ್ ಹೇಳಿದರು. ಅಮೆರಿಕದಿಂದ ಪ್ರಕಟಿಸುವ ತನ್ನ ಕೊಂಕಣೆ ಸಾಪ್ತಾಹಿಕ ವೀಜ್ ಕೊಂಕಣೆ ಮುಖಾಂತರ ಸಾಧಕರನ್ನು ಗೌರವಿಸುವ ಕೆಲಸವನ್ನು ತಾನು ಮಾಡುತ್ತಿರುವುದಾಗಿ ಅವರು ವಿವರಿಸಿದರು.
ಫಾ. ರೊನಾಲ್ಡ್ ಕುಟಿನ್ಹಾ ಸ್ವಾಗತಿಸಿದರು. ಸಾಹಿತಿ ಸಿಜೈಸ್ ತಾಕೊಡೆ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ವಿನ್ನಿಫ್ರೆಡ್ ಪಿಂಟೊ ಪ್ರಾರ್ಥನಾ ಗೀತೆ ಹಾಡಿದರು. ವಿದಿಶಾ, ವಿಯೋಲಾ ಸ್ವಾಗತ ನೃತ್ಯ ಪ್ರದರ್ಶಿಸಿದರು. ಡೊಲ್ಫಿ ಕಾಸ್ಸಿಯಾ ಕಾರ್ಯಕ್ರಮ ನಿರೂಪಿಸಿ, ಸೆಲಿನ್ ರೊಡ್ರಿಗಸ್ ವಂದಿಸಿದರು.