ಬೋಳಂಗಡಿ ಮಸೀದಿಯಲ್ಲಿ ರವಿವಾರ ಮಳೆಗಾಗಿ ವಿಶೇಷ ಪ್ರಾರ್ಥನೆ
ಬಂಟ್ವಾಳ, ಮೇ 6: ಜಿಲ್ಲೆ ಹಾಗೂ ರಾಜ್ಯ ಎದುರಿಸುತ್ತಿರುವ ನೀರಿನ ಬರವನ್ನು ನೀಗಿಸುವಂತೆ ಸೃಷ್ಟಿಕರ್ತನಲ್ಲಿ ಕೋರಿಕೊಳ್ಳಲು ತಾಲೂಕಿನ ಬೋಳಂಗಡಿ ಹವ್ವಾ ಜುಮಾ ಮಸೀದಿಯ ಆಡಳಿತ ಮಂಡಳಿ ನೇತೃತ್ವದಲ್ಲಿ ಮಸೀದಿಯ ಅಂಗಳದಲ್ಲಿ ಸಾಮೂಹಿಕ ನಮಾಝ್ ಹಾಗೂ ಪ್ರಾರ್ಥನೆಯು ಮೇ 8ರಂದು ಬೆಳಗ್ಗೆ 7 ಗಂಟೆಗೆ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಬಿ. ಮುಹಮ್ಮದ್ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅವಿಧೇಯತೆ, ವ್ಯಭಿಚಾರಗಳು ಪ್ರುವಿನ ಕ್ರೋಧಕ್ಕೆ ಕಾರಣಗಳಾಗಿದ್ದು, ಜನರು ಪ್ರಾಯಶ್ಚಿತ್ತ ಮತ್ತು ಕ್ಷಮೆ ಯಾಚನೆ ಮಾಡಬೇಕು. ಈ ನಿಟ್ಟಿನಲ್ಲಿ ಮುಸ್ಲಿಮ್ ಬಾಂಧವರೆಲ್ಲರೂ ಜೊತೆಯಾಗಿ ಬೋಳಂಗಡಿ ಹವ್ವಾ ಜುಮಾ ಮಸೀದಿಯಲ್ಲಿ ಮಸೀದಿಯ ಖತೀಬ ವೌಲಾನಾ ಯಹ್ಯಾ ತಂಞಳ್ ಮದನಿಯವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಮುಸ್ಲಿಮ್ಬಾಂಧವರು ಪ್ರಾರ್ಥನೆಯಲ್ಲಿ ಬಾಗವಹಿಸುವಂತೆ ಅವರು ಮನವಿ ಮಾಡಿದರು.
ಮಹಿಳೆಯರಿಗೂ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಸೀದಿ ಆಡಳಿತ ಮಂಡಳಿ ಸದಸ್ಯರಾದ ಮುಕ್ತಾರ್ ಅಹ್ಮದ್ ಪಾಣೆಮಂಗಳೂರು, ಇಬ್ರಾಹೀಂ ಚೆಂಡಾಡಿ, ಮುಷ್ತಾಪಾ ಎಂ.ಎಚ್ ಉಪಸ್ಥಿತರಿದ್ದರು.