ವಿಟ್ಲ: ರಸ್ತೆ ಸಂಚಾರಕ್ಕೆ ಅಡ್ಡಿ ಆರೋಪ; ಇಬ್ಬರು ಪೊಲೀಸರ ವಶಕ್ಕೆ
ವಿಟ್ಲ, ಸೆ. 17: ರಸ್ತೆ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವ ಆರೋಪದ ಮೇರೆಗೆ 2 ಕಾರುಗಳ ಸಹಿತ ಚಾಲಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಪೇಟೆಯ ಮೇಗಿನ ಪೇಟೆಯಲ್ಲಿ ಮಂಗಳವಾರ ನಡೆದಿದೆ.
ಕಾರು ಚಾಲಕರಾದ ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಸಲೀಂ ಹಾಗೂ ವೀರಂಭ ಗ್ರಾಮದ ಕೆಲಿಂಜ ನಿವಾಸಿ ರಘುನಾಥ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಸಂಜೆ 4:30ರ ಸುಮಾರಿಗೆ ವಿಟ್ಲ ಪೇಟೆಯ ಮೇಗಿನ ಪೇಟೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿಯಲ್ಲಿ 2 ಕಾರುಗಳನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ಸ್ಥಳದಲ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಸಂಚಾರ ಅಸ್ತವ್ಯಸ್ಥ ಉಂಟಾಗಿಲ್ಲದೆ, ಈ ಬಗ್ಗೆ ಸಾರ್ವಜನಿಕರು ಪೆÇಲೀಸ್ ದೂರು ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ವಿಟ್ಲ ಎಸ್ಸೈ ಯಲ್ಲಪ್ಪ ಮತ್ತು ಸಿಬ್ಬಂದಿಗಳು ರಸ್ತೆ ಸಂಚಾರಕ್ಕೆ ತೊಂದರೆಯುಂಟು ಮಾಡಿದ 2 ಕಾರುಗಳನ್ನು ಟೋಯಿಂಗ್ ವಾಹನ ಮೂಲಕ ತೆರವುಗೊಳಿಸಿ, ವಶಕ್ಕೆ ಪಡೆದರು. ಬಳಿಕ ಕಾರು ಬಿಡಿಸಲು ಠಾಣೆಗೆ ಬಂದ ಕಾರು ಚಾಲಕರನ್ನೂ ಸಹ ಬಂಧಿಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಟ್ಲ ಮುಖ್ಯ ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಇದೇ ರೀತಿ ಕ್ರಮ ಜರುಗಿಸಲಾಗುವುದು ಎಂದು ವಿಟ್ಲ ಎಸೈ ತಿಳಿಸಿದ್ದಾರೆ.